
ಕುಂದಾಪುರ ತಾ||ನ ಪ್ರತಿಷ್ಟಿತ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಮಂಜುನಾಥ ನಾಯ್ಕ ಅವರು ಇದೇ ಮೇ ೩೦ರಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಅವರು ಸುದೀರ್ಘವಾಗಿ ೪೦ ವರ್ಷಗಳ ಕಾಲ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಸಂಘದ ಬೆಳವಣಿಗೆಗೆ ಅಪಾರವಾಗಿ ದುಡಿದಿದ್ದನ್ನು ಇಲ್ಲಿ ನನೆಯಬಹುದು.

ಮೂಲತಃ ಇವರು ಹಾಲಾಡಿ ಗ್ರಾಮದ ನಾರಾಯಣ ನಾಯ್ಕ ಮತ್ತು ಮೂಕಾಂಬಿಕಾ ದಂಪತಿಗಳ ಮೂರು ಜನ ಮಕ್ಕಳಲ್ಲಿ ಹಿರಿಯರು. ಇವರ ಜನನ ೦೧-೦೬-೧೯೬೬ ಆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೆಟ್ಟಿಪಾಲು, ಆಜ್ರಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಪ್ರೌಢ ಶಿಕ್ಷಣವನ್ನು ಶಂಕರನಾರಾಯಣದಲ್ಲಿ, ಹಾಗೂ ಪಿಯುಸಿಯನ್ನು ಕುಂದಾಪುರದ ಜೂನಿಯರ್ ಕಾಲೇಜಿ ಕಾಲೇಜಿನಲ್ಲಿ ಮುಗಿಸಿದರು. ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಡೆದರು. ಹಾಗೂ ಮೂಡಬಿದ್ರೆಯಲ್ಲಿ ಸಹಕಾರಿ ಡಿಪ್ಲೊಮೊ ಕೋರ್ಸು ಮುಗಿಸಿದರು.
೦೧-೧೨-೧೯೮೬ ರಂದು ಇವರು ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಕಿರಿಯ ದರ್ಜೆ ಗುಮಾಸ್ತರಾಗಿ ನೇಮಕಗೊಂಡರು. ನಂತರ ಗುಮಾಸ್ತರಾಗಿ, ಹಿರಿಯ ಗುಮಾಸ್ತರಾಗಿ ಪದೋನ್ನತಿ ಹೊಂದಿ ೦೬-೦೪-೧೯೯೬ರಂದು ಯಡಮೊಗೆ ಶಾಖೆಯ ವ್ಯವಸ್ಥಾಪಕರಾಗಿ ನಿಯುಕ್ತಿಗೊಂಡರು. ಅಜ್ರಿಹರ, ಹಳ್ಳಿಹೊಳೆ, ಮಾನಂಜೆ ಶಾಖೆಗಳಲ್ಲಿ ೧೮ ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಅಮೋಘ ಸೇವೆ ಸಲ್ಲಿಸಿದರು. ೨೦೧೯ರಲ್ಲಿ ಪದೋನ್ನತಿ ಹೊಂದಿ ಕೇಂದ್ರ ಕಛೇರಿಯ ಇನ್ಸಪೆಕ್ಟರ್ ಆಗಿ, ಲೆಕ್ಕಪಾಲರಾಗಿ ಸೇವೆ ಸಲ್ಲಿಸಿ ೦೧-೦೬-೨೦೨೨ರಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರಾಗಿ ನಿಯುಕ್ತಿಗೊಂಡರು.
ಇವರು ಪ್ರಧಾನ ವ್ಯವಸ್ಥಾಪಕರಾಗಿರುವಾಗ ಸಂಘವು ಅಮೃತಮಹೋತ್ಸವವನ್ನು ಆಚರಣೆ ಮಾಡಿದ್ದು ಆ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ಯಶಸ್ವಿಯಾಗಿ ಜರುಗಿತು. ಇವರು ಸಂಘದಲ್ಲಿ ಸುದೀರ್ಘ ಅವಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಮೇ ೩೦ರಂದು ನಿವೃತ್ತಿಯಾಗಿದ್ದು, ಸಹಕಾರಿ ಸಂಘದ ವತಿಯಿಂದ ಇವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಇವರ ಆಡಳಿತಾವಧಿಯಲ್ಲಿ ಸಂಘದ ಬೆಳವಣಿಗೆಗೆ ಅಹರ್ನಿಶಿ ದುಡಿದು ಹಲವಾರು ಪ್ರಶಸ್ತಿಗಳನ್ನು ಸಂಘಕ್ಕೆ ಸಿಗುವಂತೆ ಮಾಡಿದ್ದಾರೆ. ತತ್ಸಂಬಂಧ ಹಲವಾರು ಸನ್ಮಾನ, ಪುರಸ್ಕಾರಗಳಿಗೂ ಬಾಜನರಾಗಿದ್ದಾರೆ. ತಮ್ಮ ಸೇವೆಯ ಸಂದರ್ಭದಲ್ಲಿ ಸಹಕಾರ ನೀಡಿದ ಆಡಳಿತ ಸಮಿತಿಗೂ, ಸಹಕಾರಿ ಸಂಘದ ಎಲ್ಲಾ ಸಿಬ್ಬಂದಿ ವರ್ಗಕ್ಕೂ, ಸದಸ್ಯರಿಗೂ ಇವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
೧೯೯೪ರಲ್ಲಿ ಜಯಂತಿ ಅವರನ್ನು ವಿವಾಹವಾಗಿ ೨ ಮಕ್ಕಳ ತಂದೆಯಾಗಿದ್ದಾರೆ. ಮಗ ನವೀನ ಪೂನಾದ ಡಿ.ಆರ್.ಡಿ.ಓ.ದಲ್ಲಿ ಉದ್ಯೋಗಿ. ಮಗಳು ಸಂಗೀತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾರೆ. ಶ್ರೀ ನಾಯ್ಕರವರ ಮುಂದಿನ ಜೀವನ ಸುಖ-ಸಂತೋಷದಿಂದ ಕೂಡಿರಲಿ ಎಂದು ಸರಸ್ವತಿ ಪ್ರಭಾ ಹಾರೈಸುತ್ತದೆ.

