ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಲೋಕವೇದ, ಸಮಾಜ ಕಲ್ಯಾಣ ಇತ್ಯಾದಿ ಬೇರೆ ಬೇರೆ ಕ್ಷೇತ್ರಕ್ಕೆ ಹಾಗೂ ತಮ್ಮ ಸುತ್ತಲ ಸಮಾಜಕ್ಕೆ ಅಪಾರ ದೇಣಿಗೆ, ಸೇವ ನೀಡಿಯೂ ಗುರುತಿಸಲ್ಪಡದ ಅಪಾರ ಹಿರಿಯ ಎಲೆಮರೆಯ ಸಾಧಕರು ನಮ್ಮ ನಡುವೆ ಇದ್ದಾರೆ. ಅವರು ಕೊಂಕಣಿ ಭಾಷೆ ಹಾಗೂ ತಾವಿರುವ ಸಮಾಜಕ್ಕೆ ೩೦ರಿಂದ ೫೦ ವರ್ಷಗಳ ಕಾಲ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ ಆದರೂ ನಾನಾ ಕಾರಣಗಳಿಂದ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕದಲ್ಲಿರುವ ಇಂಥಹ ಕೊಂಕಣಿ ಸಾಧಕರನ್ನು ಗುರುತಿಸಿ ಗೌರವಿಸ ಬೇಕೆನ್ನುವ ಉದ್ದೇಶದಿಂದ ಹುಬ್ಬಳ್ಳಿಯಿಂದ ನಿಯಮಿತವಾಗಿ ಪ್ರಕಟಗೊಳ್ಳುತ್ತಾ ಇದೀಗ ಪ್ರಕಟಣೆಯ ೩೬ ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿಯಮಿತ ಪ್ರಕಟಣೆಯ ೩೭ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆಯು ೨೦೨೨ರಿಂದ ವಯೋವೃದ್ಧ ಕೊಂಕಣಿ ಭಾಷಾ ಸಾಧಕರನ್ನು ಆಯ್ಕೆ ಮಾಡಿ ನಿಯಮಿತವಾಗಿ
ಸರಸ್ವತಿ ಪ್ರಭಾ ಪುರಸ್ಕಾರವನ್ನು ನೀಡುತ್ತಾ ಬಂದಿದೆ.
2025ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾ||ನ ಕೋಟೇಶ್ವರದಲ್ಲಿ ಜನಿಸಿ ಇದೀಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಮಹಾದಾನಿ, ಅಸಹಾಯಕರ ಆಶಾದೀಪ, ಕೊಂಕಣಿ ಸಾಹಿತ್ಯ ಹಾಗೂ ಹರಿಕಥಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ೭೬ ವರ್ಷ ವಯಸ್ಸಿನ ಶ್ರೀ ಕೆ. ಜನಾರ್ಧನ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀ ಕೆ. ಜನಾರ್ಧನ ಭಟ್ರವರ ಜನನ ಇಂದಿಗೆ ೭೬ ವರ್ಷಗಳ ಹಿಂದೆ ಕೋಟೇಶ್ವರದಲ್ಲಿ ಆಯಿತು. ಶಿಕ್ಷಣ ಪೂರ್ಣಗೊಳಿಸಿದ ನಂತರ ಇವರು ಸಿಂಡಿಕೇಟ್ ಬ್ಯಾಂಕ್ನಲ್ಲಿ ನೌಕರಿಗೆ ಸೇರಿಕೊಂಡರು. ಹಲವಾರು ದಶಕಗಳ ಕಾಲ ಅಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ನಂತರ ನಿವೃತ್ತರಾದರು. ಆ ನಂತರವೂ ಸಹ ಅವರು ತನ್ನದು ನಿವೃತ್ತ ಜೀವನವೆಂದು ಸುಮ್ಮನೇ ಉಳಿಯದೇ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದರು. ಆದರೆ ಆಗ ಅವರು ಇರಿಸಿಕೊಂಡಿದ್ದ ಒಂದು ಅತ್ಯಪರೂಪದ ಧ್ಯೇಯ ಅಥವಾ ಆದರ್ಶವೆಂದರೆ ಈ ವ್ಯವಹಾರದಲ್ಲಿ ದೊರಕುವ ಎಲ್ಲಾ ಲಾಭಾಂಶವನ್ನೂ ದಾನ, ಸಮಾಜ ಸೇವೆಗೆ ಬಳಸ ಬೇಕೆಂದು ದೃಢವಾಗಿ ನಿರ್ಧರಿಸಿದರು. ಅದರಂತೆ ಈ ತನಕ ನಡೆದುಕೊಂಡು ಸಹ ಬಂದಿದ್ದಾರೆ. ಹಲವಾರು ಕೋಟಿ ರೂಪಾಯಿಗಳನ್ನು ಸಮಾಜದ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಯೋಜನೆಗಳಿಗೆ ದಾನವಾಗಿ ನೀಡಿದ್ದಾರೆ.
ಕೊಂಕಣಿ ಭಾಷೆ ಹಾಗೂ ಸಾಹಿತ್ಯಕ್ಕೆ ಗೈದ ಸೇವೆ : ವಿಶ್ವವಿಖ್ಯಾತ ಹರಿಕಥಾ ಕೀರ್ತನಗಾರರಾದ ಶ್ರೀ ಅಚ್ಯುತದಾಸರೊಂದಿಗೆ ಹಲವಾರು ತಿಂಗಳುಗಳ ಕಾಲ ತಿರುಗಾಟ ನಡೆಸಿದರು. ಕೊಂಕಣಿ ಕೀರ್ತನೆಯಲ್ಲಿ ಪ್ರವೀಣರಾದರು. ಅಲ್ಲಲ್ಲಿ ಕೊಂಕಣಿ ಕೀರ್ತನೆಯನ್ನೂ ಪ್ರಸ್ತುತ ಪಡಿಸಿದರು, ಭಜನಾ ಸೇವೆಯಲ್ಲಿಯೂ ಅಪಾರ ಯೋಗದಾನ ನೀಡಿದ್ದಾರೆ. ಭಜನೆಯನ್ನು ಹೇಗೆ ಹಾಡಬೇಕು ಅನ್ನುವುದರ ಬಗ್ಗೆಯೂ ತಮ್ಮ ಭಜನೆಯಲ್ಲಿ ವಿವರಿಸಿದ್ದಾರೆ. ಅವರು ಹಾಡಿರುವ ಹಲವಾರು ಭಜನೆಗಳು ಯೂಟ್ಯೂಬ್ನಲ್ಲಿಯೂ ಸಹ ದೊರಕುತ್ತವೆ.


ಕೊಂಕಣಿ ಸಾಹಿತ್ಯ ಸೇವೆ : ಧಾರ್ಮಿಕತೆ ಹಾಗೂ ಆಧ್ಯಾತ್ಮ ಸಾಧನೆಯಲ್ಲಿ ಅಪಾರ ಸಾಧನೆಗೈದಿರುವ ಶ್ರೀ ಜನಾರ್ಧನ ಭಟ್ರವರು ಉಪನಿಷತ್ ಪ್ರಭಾ ಹಾಗೂ
ಭಾಗವತದ ದಶಮ ಸ್ಕಂದ ಎಂಬೆರಡು ಬಹು ಮೌಲ್ಯಯುಕ್ತ ಕೊಂಕಣಿ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಅದರೊಂದಿಗೆ ಆಧ್ಯಾತ್ಮಿಕ, ಆರೋಗ್ಯ ರಕ್ಷಣೆ, ಕ್ಯಾನ್ಸರ್ ನಿವಾರಣೆ, ನಾಮಮಂತ್ರ ಜಪದ ಮಹತ್ವ ಹೀಗೆ ಕೊಂಕಣಿಯಲ್ಲಿ ಹಲವಾರು ಉಪಯುಕ್ತ ಲೇಖನಗಳನ್ನು ಸಹ ರಚಿಸಿದ್ದಾರೆ.
ಶ್ರೀ ಜನಾರ್ಧನ ಭಟ್ರವರು ಸಮಾಜಕ್ಕೆ ನೀಡಿದ ದಾನ-ಧರ್ಮಕ್ಕಂತೂ ಲೆಕ್ಕವೇ ಇಲ್ಲ.
ಅವುಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ.
ಇಸ್ಕಾನ್ ಸಂಸ್ಥೆಗೆ ನೀಡಿದ ಅಪಾರ ದೇಣಿಗೆ :




ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಇಸ್ಕಾನ್ ವತಿಯಿಂದ ದೇಶದ ೯ ರಾಜ್ಯಗಳಲ್ಲಿ ಪ್ರತಿ ದಿನ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಒಂದು ಅತ್ಯುತ್ತಮ ಯೋಜನೆ ಅನ್ನುವುದಕ್ಕೆ ಎರಡು ಮಾತಿಲ್ಲ. ಈ ಯೋಜನೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರುವ ಶ್ರೀ ಕೆ. ಜನಾರ್ಧನ ಭಟ್ರವರು ಯೋಜನೆಯ ಪ್ರಮುಖ ದಾನಿಗಳಾಗಿ ಕೈ ಜೋಡಿಸಿದ್ದಾರೆ. ಸ್ವತಃ ತಾವೇ ಕೋಟಿ ರೂಪಾಯಿಗಳಿಗಿಂತ ಅಧೀಕ ಮೌಲ್ಯದ ೧೨ ಬಿಸಿಯೂಟ ಸಾಗಾಟದ ವಾಹನಗಳನ್ನು ಬೆಂಗಳೂರಿನ ಅಕ್ಷಯ ಪಾತ್ರೆಗೆ (ಇಸ್ಕಾನ್ ಸಂಸ್ಥೆಗೆ) ದೇಣಿಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ಹುಬ್ಬಳ್ಳಿಗೆ ೧ ಸ್ವರಾಜ್ ಮಜ್ದಾ ಬಸ್, ಮಂಗಳೂರಿಗೆ ೧ ಟಾಟಾ ೪೦೭ ಮತ್ತು ೧ ಮ್ಯಾಕ್ಸ್ ಮಹೀಂದ್ರ, ಮೈಸೂರಿಗೆ ೨ ಮ್ಯಾಕ್ಸ್ ಮಹೀಂದ್ರ, ಪುರಿಗೆ ೨ ಮ್ಯಾಕ್ಸ್ ಮಹೀಂದ್ರ, ವೃಂದಾವನಕ್ಕೆ ೫ ಮ್ಯಾಕ್ಸ್ ಮಹೀಂದ್ರ (ಇದಕ್ಕಾಗಿ ನೀಡಿರುವ ಹಣದಲ್ಲಿ ಅವರು ೧೪ ಸಣ್ಣ ವಾಹನಗಳನ್ನು ಖರೀದಿಸಿದ್ದಾರೆ) ಸೇರಿವೆ. ಶ್ರೀ ಭಟ್ರವರು ನೀಡಿರುವ ವಾಹನಗಳು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಮಧ್ಯಾಹ್ನದ ಬಿಸಿಯೂಟವನ್ನು ತಲುಪಿಸಿ ಮಾನವತೆಯ ಸೇವೆ ಸಲ್ಲಿಸುತ್ತಿವೆ.


ಇಲ್ಲಿಗೆ ಸುಮ್ಮನಾಗದೇ ಶ್ರೀ ಜನಾರ್ಧನ ಭಟ್ರವರು ಇತರ ಸಂಘ-ಸಂಸ್ಥೆಗಳಿಂದಲೂ ಇಸ್ಕಾನ್ ಹಾಗೂ ಇತರ ಸಂಘ-ಸಂಸ್ಥೆಗಳಿಗೆ ಕೋಟಿ ಕೋಟಿ ರೂಪಾಯಿಗಳ ದೇಣಿಗೆ ದೊರೆಯುವಂತೆ ಮಾಡಿ ದುರ್ಬಲರು, ಬಡವರ ಬಗ್ಗೆ ತಮ್ಮ ಮಾನವತೆಯ ಅಂತಃಕರಣಪೂರ್ವಕ ಕಾಳಜಿ ತೋರಿಸಿದ್ದಾರೆ.

ಇದರೊಂದಿಗೆ ಇಸ್ಕಾನ್ ಮೈಸೂರು ಇವರು ಮೈಸೂರಿನಲ್ಲಿ ಕಟ್ಟಿಸುತ್ತಿರುವ ಶ್ರೀ ಅನಂತ ಪದ್ಮನಾಭ ದೇವರ ಮೂರ್ತಿಗೆ ರೂ. 1೦,೦೦,೦೦೦/-(ರೂ. ಹತ್ತು ಲಕ್ಷಗಳ) ದೇಣಿಗೆ ನೀಡಿದ್ದಾರೆ. ಮೈಸೂರಿನ ಶ್ರೀ ಚಾಮುಡೇಶ್ವರಿ ಬೆಟ್ಟದಲ್ಲಿ ಸ್ಥಾಪಿಸಲ್ಪಟ್ಟ ಶ್ರೀರಾಮ, ಸೀತ ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತ ಮತ್ತು ಸೂರ್ಯಭಗವಾನ ದೇವರ ಮೂರ್ತಿ ಪ್ರತಿಷ್ಠಾಪನೆಯಲ್ಲಿಯೂ ಶ್ರೀ ಜನಾರ್ಧನ ಭಟ್ಟರವರ ದಾರಾಳಮನದ ದಾನ ಸಂದಿದೆ. ಅದೇ ರೀತಿ ಇತರ ಹಲವಾರು ದೇವಸ್ಥಾನಗಳಲ್ಲಿ ಮೂರ್ತಿ ಸ್ಥಾಪನೆ, ಅಭಿವೃದ್ಧಿ ಕಾರ್ಯಗಳಲ್ಲಿಯೂ ಶ್ರೀ ಜನಾರ್ಧನ ಭಟ್ರವರು ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡಿರುತ್ತಾರೆ.
ತಾವು ಹುಟ್ಟಿರುವ ಗೌಡ ಸಾರಸ್ವತ ಸಮಾಜದ ಹಲವಾರು ದೇವಾಲಯ ಹಾಗೂ ಮಠಗಳಿಗೂ ಶ್ರೀ ಕೆ. ಜನಾರ್ಧನ ಭಟ್ರವರು ಮೂರ್ತಿಗಳಿಗಾಗಿ, ಅಭಿವೃದ್ಧಿಗಾಗಿ ಕೊಡುಗೈ ದೊರೆಯಂತೆ ಕೋಟ್ಯಾಂತರ ರೂಪಾಯಿಗಳ ದೇಣಿಗೆ ನೀಡಿರುವುದು ಸಹ ಅವರ ಸ್ವ ಸಮಾಜ ಪ್ರೇಮ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ತೋರಿಸಿ ಕೊಡುತ್ತದೆ.
ಅನಾಥ ಆತ್ಮಕ್ಕೆ ಸದ್ಘತಿ ಹಾಗೂ ಮುಕ್ತಿ :


ಈ ಭೂಮಂಡಲದ ಮೇಲೆ ಜನನ ಹೊಂದಿದ ಮನುಷ್ಯ ಜೀವಿ ಮರಣ ಹೊಂದಿದ ನಂತರ ಆ ಜೀವಿಯ ಆತ್ಮಕ್ಕೆ ಸದ್ಘತಿ ದೊರಕ ಬೇಕಾದರೆ ಅಗತ್ಯವಾದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸದಿದ್ದರೆ ಆ ಆತ್ಮವು ಅತೃಪ್ತ ಆತ್ಮವಾಗಿ ತಿರುಗಾಡುತ್ತಿರುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅದನ್ನು ಮನಗಂಡು ಅನಾಥರಾಗಿ ಮಡಿದ ನತದೃಷ್ಟರ ಆತ್ಮಸದ್ಘತಿಗಾಗಿ ಶ್ರೀ ಕೆ. ಜನಾರ್ಧನ ಭಟ್ರವರು ಕಳೆದ ಎರಡು, ಮೂರು ವರ್ಷಗಳಿಂದ ಪ್ರತಿ ವರ್ಷ ಸಹಸ್ರಾರು ರೂಪಾಯಿಗಳನ್ನು ಖರ್ಚು ಮಾಡಿ ಮರಣದ ನಂತರ ಸದ್ಘತಿ ಇಲ್ಲದೇ ಇರುವ ಲಕ್ಷಾಂತರ ದಿವ್ಯಾತ್ಮಗಳಿಗೆ ಸದ್ಘತಿ ದೊರೆಯುವಂತೆ ಮಾಡಿದ್ದಾರೆ. ತತ್ಸಂಬಂಧ ದಿವ್ಯಾತ್ಮಗಳ ಆತ್ಮ ಸದ್ಘತಿಯ ಸಲುವಾಗಿ ಮೋಕ್ಷನಾರಾಯಣ ಬಲಿ ಕಾರ್ಯಕ್ರಮಗಳ ಆಯೋಜನೆಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ.
ಆಧ್ಯಾತ್ಮ, ಸಂಗೀತದಲ್ಲಿ ಶ್ರೀ ಕೆ. ಜನಾರ್ಧನ ಭಟ್ರವರಿಗೆ ವಿಶೇಷ ಆಸಕ್ತಿ ಇದ್ದು ಆರೋಗ್ಯ ರಕ್ಷಣೆಗಾಗಿ ಹಲವಾರು ಸುಲಭ ಪ್ರಯೋಗಗಳನ್ನು ಮಾಡಿದ್ದಾರೆ. ಶ್ರೀ ಕಾಶೀ ಮಠ ಸಂಸ್ಥಾನದ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪರಮಾಪ್ತರಲ್ಲಿ ಒಬ್ಬರಾಗಿದ್ದು ಹರಿದ್ವಾರದಲ್ಲಿ ಶ್ರೀ ಸಂಸ್ಥಾನ ಕಾಶೀಮಠದ ವತಿಯಿಂದ ನಿರ್ಮಾಣಗೊಂಡ ವ್ಯಾಸ ಮಂದಿರದ ನಿರ್ಮಾಣಕ್ಕಿದ್ದ ಬಾಹ್ಯ ಅಡೆತಡೆಗಳನ್ನು ನಿವಾರಿಸಿ ಭವ್ಯ ವ್ಯಾಸಮಂದಿರದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವುದನ್ನು ನಾವಿಲ್ಲಿ ನನೆಯ ಬಹುದು.
ಹೀಗೆ ಶ್ರೀ ಜನಾರ್ಧನ ಭಟ್ ಅವರ ಸಾಧನೆಯ ಬಗ್ಗೆ ಬರೆದಷ್ಟೂ ಬರೆಯಲು ಮತ್ತಷ್ಟು ವಿಷಯ ಇರುತ್ತದೆ. ಅದರೊಂದಿಗೆ ಅವರ ಸರಳತೆ, ವಿನಯಶೀಲತೆಯೂ ಸಹ ಯುವ ಪೀಳಿಗೇಗೆ ಮಾದರಿ ಎಂದರೆ ತಪ್ಪಾಗಲಾರದು. ದುರ್ಬಲರ ಕುರಿತು, ಸಮಾಜ, ಭಾಷೆ, ಸಂಸ್ಕೃತಿಯ ಬಗ್ಗೆ ಅತೀವ ಕಾಳಜಿ ಹೊಂದಿರುವ ಶ್ರೀಯುತರು ಈಗಲೂ ಸಹ ಆ ಬಾಬ್ತು ತಮ್ಮಿಂದ ಸಾಧ್ಯವಾದಷ್ಟು ಸಹಾಯಹಸ್ತ ಚಾಚುತ್ತಿದ್ದಾರೆ. ಇವರ ಈ ಸಾಧನೆಗಳು ಇತರರಿಗೂ ಪ್ರೇರಣೆಯಾದಲಿ ಎಂಬ ಕಾರಣದಿಂದ “ಸರಸ್ವತಿ ಪ್ರಭಾ ಪುರಸ್ಕಾರ ೨೦೨೫ಕ್ಕೆ ಶ್ರೀ ಕೋಟೇಶ್ವರ ಜನಾರ್ಧನ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
ಅವರಿಗೆ ಅಭಿನಂದನೆಗಳು.