Search for:
  • Home/
  • Kannada/
  • ಅನ್ನ ನುಂಗಿದ ಕೈ (ಸಣ್ಣ ಕಥೆ)

ಅನ್ನ ನುಂಗಿದ ಕೈ (ಸಣ್ಣ ಕಥೆ)

Spread the love


ರೇವತಿ ಅವಸರ ಅವಸರದಿಂದ ದಡದಡ ಓಡುತ್ತಾ ಸುಟ್ಟುಕೊಂಡಿರುವ ರೋಗಿಗಳನ್ನು ಹಾಕಿದ್ದ ೧೦೩ ನಂಬರಿನ ಆ ವಾರ್ಡಿಗೆ ಬಂದಳು. ತನ್ನ ಮಗಳು ಅಶ್ವಿನಿಯನ್ನು ಎಲ್ಲಿ ಹಾಕಿರಬಹುದು ಎಂದು ಹುಡುಕುವ ಸಲುವಾಗಿ ಸುತ್ತಲೂ ನೋಡಿದಳು. ಅಲ್ಲಿ ಎಳೆಂಟು ಬೆಡ್ಡುಗಳಿದ್ದವು. ಪ್ರತಿಯೊಂದಕ್ಕೂ ಮಚ್ಚರದಾನಿಯಂತಹ ಒಂದೊಂದು ಪರದೆಯನ್ನು ಹಾಕಲಾಗಿತ್ತು. ತನ್ನ ಮಗಳು ಅದರಲ್ಲಿ ಯಾವ ಹಾಸಿಗೆಯಲ್ಲಿ ಇದ್ದಿರಬಹುದು ಎಂದು ತಿಳಿಯದೇ ಆತಂಕ ಹಾಗೂ ದುಃಖದಿಂದ ಅಶ್ವಿನೀ.. ಅಶ್ವಿನೀ… ಮಗಾ ಎಲ್ಲಿದ್ದೀಯಾ. ಎಂದು ಸಣ್ಣ ಧ್ವನಿಯಲ್ಲಿ ಕೂಗುತ್ತಾ ಪ್ರತಿಯೊಂದು ಬೆಡ್‌ನ್ನು ಪರಿಶೀಲಿಸುತ್ತಾ ರೇವತಿ ಬಂದಳು.
ರೇವತಿ ನಡೆಯುತ್ತಿರುವ ಜಾಗೆಯ ಹತ್ತಿರವೇ ಇದ್ದ ಬೆಡ್ಡಿನಿಂದ ಅಮ್ಮಾ.. ಅಮ್ಮಾ.. ಎನ್ನುವ ವೇದನಾ ಭರಿತ ಕ್ಷೀಣ ಸ್ವರವು ಯಾವುದೋ ಬಾವಿಯೊಳಗಿಂದ ಬಂದಂತೆ ಕ್ಷೀಣವಾಗಿ ಕೇಳಿಸಿತು. ಗಕ್ಕನೇ ರೇವತಿಯು ತನ್ನ ದೃಷ್ಠಿಯನ್ನು ಆತ್ತ ಹರಿಸಿದಳು. ದ್ವನಿ ಬಂದ ಬೆಡ್ಡಿನ ಮೇಲೆ ಒಂದು ಮಾಂಸದ ಮುದ್ದೆಯಂತೆ ಮಲಗಿದ್ದಾಳೆ ಅಶ್ವಿನಿ. ಮೈ ಮೇಲಿನ ಬಟ್ಟೆ ಎಲ್ಲವನ್ನು ಕಳೆದು ಮಾನ ಮುಚ್ಚುವ ಜಾಗದಲ್ಲಿ ಮಾತ್ರ ಸಣ್ಣ ಬಟ್ಟೆಯನ್ನು ಮುಚ್ಚಿದ್ದರು. ಮಗಳ ಆ ಅವಸ್ಥೆಯನ್ನು ನೋಡಿ ರೇವತಿಗೆ ಹೊಟ್ಟೆಯೊಳಗೆ ಸಂಕಟವಾದಂತೆ ಆಗಿ, ತಲೆ ತಿರುಗಿದಂತೆ ಆಗಿ ತಾನು ಕೆಳಗೆ ಬಿದ್ದು ಬಿಡಬಾರದೆಂದು ಆಕೆ ಮಗಳು ಮಲಗಿದ್ದ ಮಂಚದ ಕಬ್ಬಿಣದ ಸರಳನ್ನು ಆಧಾರಕ್ಕಾಗಿ ಹಿಡಿದುಕೊಂಡಳು. ಹಾಗೆಯೇ ನೆಲದ ಮೇಲೆ ಕುಳಿತು ಕೊಂಡು ಹಣೆ ಹಣೆ ಬಡಿದುಕೊಳ್ಳುತ್ತಾಅಯ್ಯೋ ಅಶ್ವಿನಿ.. ನಿನ್ನನ್ನು ನಾನು ಈ ಅವಸ್ಥೆಯಲ್ಲಿ ನೋಡಬೇಕಾಯಿತೆ? ಇದನ್ನು ನೋಡುವುದಕ್ಕಿಂತ ಮೊದಲೇ ನಾನು ಸತ್ತು ಹೋಗಿದ್ದರೆ ಚೆನ್ನಾಗಿತ್ತು. ಮಗಳನ್ನು ನೋಡಿ ಆಕೆಗೆ ಹೃದಯ ಕಿತ್ತು ಬರುವಷ್ಟು ಸಂಕಟವಾಗುತ್ತಿದ್ದರೂ ಅಲ್ಲಿರುವ ಇತರ ರೋಗಿಗಳಿಗೆ ತೊಂದರೆಯಾಗ ಬಾರದೆಂದು ಸಣ್ಣ ಧ್ವನಿಯಲ್ಲಿ ಮನದಲ್ಲಿಯೇ ರೋದಿಸಿದಳು. ಆದರೆ ಆಕೆಯ ಮನಸ್ಸಿಗಾದ ಘಾಸಿಯ ತೀವ್ರತೆ ಎಷ್ಟೆಂದು ಆಕೆಯ ಕಣ್ಣಿಂದ ಇಳಿಯುವ ಕಣ್ಣೀರನ್ನು ನೋಡಿದರೆ ಅರಿವಾಗುತ್ತಿತ್ತು.
ತಾಯಿಯನ್ನು ನೋಡಿದ ಕೂಡಲೇ ಅಶ್ವಿನಿಗೆ ಸಹಿತ ಹೃದಯ ತುಂಬಿ ಬಂತು. ಮೈ ಎಲ್ಲಾ ಸಹಿಸಲು ಅಸಾಧ್ಯವಾದಂತಹ ಉರಿ ಅದರೊಂದಿಗೆ ಒತ್ತರಿಸಿಕೊಂಡು ಬರುತ್ತಿದ್ದ ಅಳು. ಆಕೆಗೆ ತಾಯಿಯ ತೊಡೆಯ ಮೇಲೆ ಮಲಗಿ ಗಟ್ಟಿಯಾಗಿ ಅತ್ತು ತನ್ನ ದುಃಖವನ್ನೆಲ್ಲ ಹೊರಗೆ ಹಾಕಬೇಕೆನಿಸುತ್ತದೆ. ಆದರೆ ತನ್ನ ಸುತ್ತಲೂ ತನ್ನಂತೆ ಸುಟ್ಟ ಗಾಯಗಳಿಂದ ಜೀವನ್ಮರಣದ ಸ್ಥಿತಿಯಲ್ಲಿರುವ ಬೇರೆ ಇತರ ರೋಗಿಗಳಿಲ್ಲವೇ? ತಾನು ಬಿಕ್ಕಿ ಬಿಕ್ಕಿ ಅತ್ತರೆ ಅವರಿಗೂ ದುಃಖವಾದೀತು, ನಿದ್ದೆಯಲ್ಲಿ ನೋವು ಮರೆತು ನಿದ್ರಿಸುತ್ತಿರುವವರಿಗೆ ಎಚ್ಚರವೂ ಆಗಬಹುದು…. ಅಶ್ವಿನಿ ತುಟಿ ಕಚ್ಚಿಕೊಂಡು ದುಃಖವನ್ನು ನುಂಗಲು ತುಟಿ ಕಚ್ಚಿಕೊಂಡಾಗ ಸಹಿತ ಅಸಹನೀಯ ನೋವು….! ಅಯ್ಯೋ... ಅಮ್ಮಾ.... ನೋವಿನಿಂದ ಮುಂದೆ ಧ್ವನಿ ಬರಲಿಲ್ಲ. ಮಗೂ… ಹೀಗೇಕಾಯಿತು ನಿನ್ನ ಜೀವನ…? ಒಳ್ಳೆಯ ಗಂಡ… ತುಂಬಾ ಆಸ್ತಿಪಾಸ್ತಿ ಇದೆ, ಉತ್ತಮ ಉತ್ಪನ್ನವು ಇದೆ ಎಂದು ಒಳ್ಳೆಯ ಹುಡುಗನನ್ನು ಹುಡುಕಿ, ಎರಡೆರಡು ಸಲ ವಿಚಾರಿಸಿ ಕೊಟ್ಟರೂ ಹೀಗಾಗಿ ಹೋಯಿತಲ್ಲ ನಿನ್ನ ಸ್ಥಿತಿ…. ದೇವರು ನಿನ್ನ ಗಂಡನಿಗೆ ಕಡಿಮೆ ಆಯುಷ್ಯ ಕೊಟ್ಟು ಬೇಗನೇ ಕರೆದು ಕೊಂಡ… ಆಗಿದ್ದು ಆಗಿ ಹೋಯಿತು… ಅವನು ಚಿನ್ನದಂತಹ ಎರಡು ಮಕ್ಕಳನ್ನು ಕೊಟ್ಟು ಹೋಗಿದ್ದಾನೆ. ಬೇಕಾದಷ್ಟು ಆಸ್ತಿಪಾಸ್ತಿ ಮಾಡಿಟ್ಟು ಹೋಗಿದ್ದಾನೆ… ಮಗಳ ಜೀವನಕ್ಕೇನೂ ಕಷ್ಟವಿಲ್ಲ… ಎಂದು ಸಮಾಧಾನದಿಂದಿದ್ದರೆ ಇದೇನು ಆಗಿ ಹೋಯಿತೆ ನಿನ್ನ ಜೀವನದಲ್ಲಿ… ಆ ದೇವರಿಗೇಕೆ ನಿಮ್ಮ ಮೇಲೆ ಇಷ್ಟೊಂದು ಸಿಟ್ಟು… ಇದೆಲ್ಲವನ್ನು ನೋಡಿ ಸಮಾಧಾನದಿಂದಿರಲು ನನ್ನಿಂದ ಆಗುತ್ತಿಲ್ಲ ಅಶ್ವಿನಿ… ಅಡುಗೆ ಮನೆಯಲ್ಲಿ ನನಗೆ ಎಲ್ಲಾದರೂ ಒಂದು ಚೂರು ಬೆಂಕಿ ತಗುಲಿ ಸಣ್ಣ ಗುಳ್ಳೆಯಾದರೂ ದಿನಪೂರ್ತಿ ಅದರ ಉರಿಯನ್ನು ಅನುಭವಿಸಲು ಕಷ್ಟವಾಗುತ್ತದೆ. ಹಾಗಿರುವಾಗ ಇಡೀ ಮೈಯನ್ನು ಸುಟ್ಟುಕೊಂಡು ನೀನು ಈ ನೋವನ್ನು ಹೇಗೆ ಸಹಿಸಿಕೊಳ್ಳುವಿ ಮಗಳೇ…? ಉಕ್ಕಿ ಉಕ್ಕಿ ಬರುವ ದುಃಖವನ್ನು ನುಂಗಿ ಕೊಳ್ಳಲು ಸಾಧ್ಯವಾಗದೇ ಆಕೆಗೆ ಅರಿವಿಲ್ಲದೇ ದುಃಖಿಸುವ ಧ್ವನಿ ಜೋರಾಗಿ ಇತರ ರೋಗಿಗಳಿಗೆ ಕಿರಿಕಿರಿಯಾಗ ತೊಡಗುತ್ತದೆ. ಅದನ್ನು ಕೇಳಿ ನರ್ಸ್ ಒಬ್ಬಳು ಓಡೋಡಿ ಬಂದಳು.
ಏಯ್.. ಏಯ್.. ಯಾರದು? ಬುದ್ಧಿ ಇಲ್ಲದವರಂತೆ ಬೊಬ್ಬೆ ಹಾಕುತ್ತಿರುವವರು. ಎಂದು ಕಿರುಚುತ್ತಾ ರೇವತಿಯ ಹತ್ತಿರ ಬಂದುಏನಮ್ಮಾ… ನೋಡಿದರೆ ನೀವು ಸುಶಿಕ್ಷಿತರಂತೆ ಕಾಣುತ್ತೀರಿ… ಆದರೆ ಮಾಡುತ್ತಿರುವುದು ಸರಿಯೇ? ಇಲ್ಲಿ ಹೀಗೆ ಅಳಬಾರದು, ಕಿರುಚ ಬಾರದು, ಬೊಬ್ಬೆ ಹೊಡೆಯಬಾರದು ಎಂದು ಗೊತ್ತಿಲ್ಲವೇ ನಿಮಗೆ… ಬೇರೆ ರೋಗಿಗಳಿಗೆ ತೊಂದರೆ ಆಗುವುದಿಲ್ಲವೇ? ಎಂದು ಗದರುತ್ತಾ ಆಕೆಯ ರಟ್ಟೆ ಹಿಡಿಯಲು ಹೋಗುತ್ತಾಳೆ.
ನರ್ಸ್ ಬಂದು ಗದರಿಸಿದಾಗ ರೇವತಿಗೆ ತಾನು ಆಸ್ಪತ್ರೆಯಲ್ಲಿ ಇರುವ ವಿಷಯ ನೆನಪಿಗೆ ಬಂದು ಕ್ಷಮಿಸಿ... ಕ್ಷಮಿಸಿ... ಮಗಳ ಕಷ್ಟ ನೋಡಲಾಗದೇ ಸಂಕಟದಲ್ಲಿ ಸ್ವಲ್ಪ ಜೋರಾಗಿ ಅತ್ತೆನೆಂದು ಕಾಣಿಸುತ್ತದೆ... ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ. ನೋಡಿಯಮ್ಮ…. ಈ ಸಂಕಟ ನೋವುಗಳನ್ನು ನಿಮ್ಮ ಮಗಳೊಬ್ಬಳೇ ಅನುಭವಿಸುತ್ತಿದ್ದಾಳೆಂದು ತಿಳಿಯಬೇಡಿ. ಇಲ್ಲಿರುವ ಎಲ್ಲಾ ರೋಗಿಗಳ ಕಷ್ಟ, ದುಃಖ ಅಂತಹದೇ… ಆಸ್ಪತ್ರೆಗೆ ಬಂದರೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ಇರಬೇಕು… ನೀವು ಹೀಗೆ ಅಳುತ್ತಾ ಕುಳಿತರೆ ಇತರ ರೋಗಿಗಳ ಮನಸ್ಸಿಗೆ ಎಷ್ಟು ದುಃಖವಾಗಬಹುದು. ಸ್ವಲ್ಪ ವಿಚಾರ ಮಾಡಿರಿ… ಈಗ ನರ್ಸ್‌ನ ಧ್ವನಿ ಮೊದಲು ಇದ್ದಷ್ಟು ತೀಕ್ಣವಾಗಿರಲಿಲ್ಲ.
ಅಷ್ಟರೊಳಗೆ ಅಶ್ವಿನಿ ಸಿಸ್ಟರ್... ಸಿಸ್ಟರ್... ತುಂಬಾ ಉರಿಯುತ್ತಿದೆ... ಈ ಉರಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ... ಈ ಉರಿ ಕಡಿಮೆಯಾಗಲು ಒಂದು ಇಂಜಕ್ಷನ್ನಾದರೂ ಕೊಡಿ... ಪ್ಲೀಸ್... ಪ್ಲೀಸ್... ತುಂಬಾ ಕಷ್ಟ ಹಾಗೂ ದುಃಖದಿಂದ ಚೀರುತ್ತಾ ವಿನಂತಿಸಿದಳು. ನರ್ಸ್ ರೇವತಿಯ ಮುಖವನ್ನು ನೋಡಿದಳು. ಆಕೆ ಪಶ್ಚಾತ್ತಾಪದಿಂದ ಮುಖವನ್ನು ಮೇಲೆತ್ತಲಾಗದೇ ಕುಳಿತಿದ್ದಳು. ನರ್ಸ್ ರೇವತಿಯ ಹತ್ತಿರ ಬಂದುಇಲ್ಲಿರುವ ನಾವೂ ಮನುಷ್ಯರೇ… ಹೀಗೆ ಸುಟ್ಟುಕೊಂಡು ಬಂದ ರೋಗಿಗೆ ಮೊದಲು ಸಲಾಯಿನ್ ಬಾತ ಕೊಡುತ್ತೇವೆ. ಕಪ್ಪಾಗಿರುವ ಚರ್ಮ ತೆಗೆದು ಸಿಲ್ವರ್ ಡ್ರಗ್ ಮುಲಾಮು ಹಚ್ಚುತ್ತೇವೆ. ನಂತರ ನೋವು ನಿವಾರಕ ಇಂಜೆಕ್ಷನ್, ಸಲಾಯಿನ್ ಹಾಗೂ ನಿದ್ರೆ ಮಾತ್ರಗಳನ್ನು ನೀಡುತ್ತೇವೆ. ತುಂಬಾ ಸುಟ್ಟಗಾಯಗಳಾಗಿದ್ದರೆ ಕೊಲೆಜಿನ್ ಶೀಟ್ ಅನ್ನು ಸಹ ಹಾಕುತ್ತೇವೆ. ಇಷ್ಟು ಮಾಡಿದರೂ ಆ ರೋಗಿಗಳ ಒದ್ದಾಟವನ್ನು ನೋಡುವಾಗ ನಮಗೂ ಯಾಕಾದರೂ ಈ ಕೆಲಸಕ್ಕೆ ಬಂದೆವೋ ಎಂದು ಅನಿಸಿದ್ದಿದೆ. ಈಗ ನೀವೆ ನೋಡಿ ನಿಮ್ಮ ಮಗಳು ಬಂದು ಇನ್ನೂ ಎರಡು, ಮೂರು ಗಂಟೆಗಳಾಗಲಿಲ್ಲ. ಆಕೆ ನೋವು, ಉರಿಯಿಂದ ನರಳ ಬಾರದು ಎಂದು ಇಷ್ಟರೊಳಗೆ ಎರಡು ಇಂಜೇಕ್ಷನ್ ಕೊಟ್ಟಾಗಿದೆ. ಎರಡು ಇಂಜೇಕ್ಷನ್ನಿನ ಮಧ್ಯೆ ಕನಿಷ್ಠ ನಾಲ್ಕು ಗಂಟೆಯ ಅಂತರವಿರಬೇಕೆಂದು ನಿಯಮವಿದೆ. ಆದರೂ ನಿಮ್ಮ ಮಗಳು ಉರಿಯನ್ನು ಅನುಭವಿಸಲಾರೆನೆಂದು ಒದ್ದಾಡುತ್ತಿದ್ದಾಳೆ… ವಿಚಾರ ಮಾಡಿರಿ… ನಿಮ್ಮ ಸಂಕಟ ದೊಡ್ಡದೋ ಅಥವಾ ಅವಳ ದುಃಖ, ನರಳಾಟ ದೊಡ್ಡದೋ ಎಂದು… ಇಷ್ಟು ಮಾತನಾಡುವುದರೊಳಗೆ ಆಕೆಯ ಕಣ್ಣುಗಳು ಮಂಜಾಗಿದ್ದವು. ಆಕೆ ಅಶ್ವಿನಿಗೆ ಕೊಡಲು ಮತ್ತೊಂದು ಇಂಜಕ್ಷನ್ ತರಲು ಹೋದಳು. ರೇವತಿಯು ಸಹ ಭಾರವಾದ ಮನಸ್ಸಿನಿಂದ ಹೊರಗೆ ಬಂದಳು. ಆಕೆಯ ಎದುರಿಗೆ ಡಾಕ್ಟರ ಬರುತ್ತಿರುವುದನ್ನು ನೋಡಿ ಅವರಿಗೆ ನಮಸ್ಕಾರ ಹೇಳಿದಳು.
ನೀವೂಽ... ಆಕೆ ಯಾರೆಂದು ತಿಳಿಯದೆ ಡಾಕ್ಟರು ಆಕೆಯನ್ನೇ ಪ್ರಶ್ನಾರ್ಥಕವಾಗಿ ನೋಡುತ್ತಾ ನಿಂತರು.ನಾನು ರೇವತಿ ಅಂತ ಡಾಕ್ಟ್ರೆ…. ಹತ್ತನೇ ನಂಬರಿನ ಬೆಡ್ಡಿನ ಮೇಲೆ ಇದ್ದಾಳಲ್ಲ… ಅಶ್ವಿನಿ ಎನ್ನುವ ಪೇಷಂಟ್… ಆಕೆ ನನ್ನ ಮಗಳು… ಡಾಕ್ಟರರ ಹತ್ತಿರ ಇಷ್ಟು ಮಾತನಾಡುವದರೊಳಗೆ ಆಕೆಗೆ ಹೃದಯ ತುಂಬಿ ಬಂದು ಕಣ್ಣಂಚಿನಲ್ಲಿ ನೀರಾಡತೊಡಗಿತು.
ಅದನ್ನು ನೋಡಿ ಡಾಕ್ಟರರಿಗೂ ತುಂಬಾ ಕೆಟ್ಟದೆನಿಸಿತು. ಆ ರೋಗಿ ಬದುಕುವ ಯಾವುದೇ ಭರವಸೆ ಇಲ್ಲ ಎಂದು ಅದಾಗಲೇ ಡಾಕ್ಟರರು ತೀರ್ಮಾನಿಸಿ ಆಗಿತ್ತು. ಈಗ ಆಕೆಯ ತಾಯಿಯ ಸಂಕಟವನ್ನು ನೋಡಿ ಕನಿಕರ ಸೂಚಿಸುವುದನ್ನು ಬಿಟ್ಟು ಅವರೇನು ಮಾಡಲು ಬಂದೀತು?. ಅವರು ದೇವರಲ್ಲವಲ್ಲ!.. ಎಲ್ಲವೂ ಸರಿಯಾಗಿ ಬಿಡಲಿ ಎಂದು ವರ ಕೊಡಲು…! ಆದರೂ ಆಕೆಗೆ ನಿರಾಶೆ ಆಗಬಾರದು ಸ್ವಲ್ಪವಾದರೂ ಸಮಾಧಾನ ಮಾಡಬೇಕೆಂದು ಧೈರ್ಯ ತೆಗೆದುಕೊಳ್ಳಿ ತಾಯಿ.. ಏನೂ ಆಗುವುದಿಲ್ಲ. ದೇವರ ಮೇಲೆ ಭಾರ ಹಾಕಿ... ಎನ್ನುತ್ತಾ ಮುಂದಡಿ ಇಟ್ಟರು. ಅಷ್ಟರೊಳಗೆ ಡಾಕ್ಟರರ ಇನ್ನೂ ಸಮೀಪಕ್ಕೆ ಹೋದ ರೇವತಿ ತುಂಬಾ ಸಣ್ಣ ಧ್ವನಿಯಲ್ಲಿ ಅವರೊಬ್ಬರಿಗೆ ಮಾತ್ರ ಕೇಳುವಂತೆಡಾಕ್ಟ್ರೆ… ನನ್ನ ಮಗಳು ಬದುಕ ಬಹುದೇ… ಕೇಳುವಾಗ ಅವಳ ಧ್ವನಿ ನಡುಗಲಾರಂಭಿಸಿತ್ತು.
ಒಮ್ಮೆ ಆಕೆಯ ಮುಖವನ್ನೇ ದೀರ್ಘವಾಗಿ ನೋಡಿದ ಡಾಕ್ಟರು ಎಪ್ಪತ್ತೆರಡು ಗಂಟೆಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ ತಾಯಿ... ಶೇಕಡಾ ಐವ್ವತ್ತಕ್ಕಿಂತ ಹೆಚ್ಚು ಸುಟ್ಟ ಗಾಯಗಳಾದವರು ಬದುಕುವುದು ಸ್ವಲ್ಪ ಕಷ್ಟವೇ! ನಿಮ್ಮ ಮಗಳ ಶರೀರ ಎಂಬತ್ತೈದು ಪರ್ಸೆಂಟ್ ಸುಟ್ಟಿದೆ.... ನಿರಾಶೆಯಿಂದ ಇಷ್ಟು ಹೇಳಿದ ಡಾಕ್ಟರು ಆಕೆ ಮತ್ತೇನಾದರೂ ಪ್ರಶ್ನೆ ಕೇಳಬಹುದೆಂಬ ಆತಂಕದಿಂದ ದಾಪುಗಾಲು ಹಾಕುತ್ತಾ ಅಲ್ಲಿಂದ ಹೊರಟೇ ಬಿಟ್ಟರು. ರೇವತಿಯ ಆತಂಕ ಇಮ್ಮಡಿಯಾಗಿ ತುಂಬಾ ಪ್ರಯತ್ನಪೂರ್ವಕವಾಗಿ ದುಃಖವನ್ನು ನುಂಗಿಕೊಳ್ಳುತ್ತಾ ವಾರ್ಡಿನಿಂದ ಹೊರಕ್ಕೆ ಬಂದಳು. ಅಲ್ಲಿ ರೇವತಿಯ ಮೊಮ್ಮಗ ರಮೇಶನು ಗೋಡೆಗೆ ಒರಗಿಕೊಂಡು ಕೈನಲ್ಲಿ ಮೊಬೈಲ್ ಹಿಡಿದುಕೊಂಡು ಏನೋ ಮಾಡುತ್ತಿದ್ದ. ಹತ್ತಿರ ಬಂದು ನೋಡಿದರೆ ಗೇಮ್ ಆಡುತ್ತಿದ್ದ.ಅಯ್ಯೋ ಅಲ್ಲಿ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಾ ಇದ್ದರೆ ಇವನಿಗೆ ಗೇಮ್ ಆಡುವ ಹುಚ್ಚೇ? ರೇವತಿಗೆ ಒಂದಿಷ್ಟು ಸಿಟ್ಟು ಬಂತು. ಅದರ ಹಿಂದೆಯೇ ತಾಯಿಗಾದ ಅಪಘಾತದಿಂದ ಆತನ ಮನಸ್ಸಿಗಾದ ಘಾಸಿಯಿಂದ ಹೊರಬರಲು ಗೇಮ್ ಆಡುತ್ತಿರ ಬಹುದು... ಆಡಿದರೆ ಆಡಲಿ... ಆತ ತಾಯಿಯ ಹತ್ತಿರ ದುಃಖ ಪಡುತ್ತಾ ಕುಳಿತು ಕೊಂಡು ಬಿಟ್ಟಿದ್ದರೆ ಆಕೆಯ ದುಃಖ, ನೋವೇನಾದರೂ ಕಮ್ಮಿ ಆಗುತ್ತದಯೇ? ಎಂದು ತನ್ನಷ್ಟಕ್ಕೇ ಸಮಾಧಾನ ಮಾಡಿ ಕೊಂಡು ರೇವತಿ ರಮೇಶನ ಹತ್ತಿರ ಬಂದುಮಗೂ ರಮೇಶ … ಎಂದು ಮಾತು ಪ್ರಾರಂಭಿಸಿದಳು.
ಅನಿರೀಕ್ಷಿತವಾಗಿ ಸಮೀಪದಲ್ಲಿಯೇ ಅಜ್ಜಿಯ ಧ್ವನಿ ಕೇಳಿದ ರಮೇಶ ಒಮ್ಮೆ ನಿಂತಲ್ಲಿಯೇ ಹೌಹಾರಿದ. ಅಮ್ಮನಿಗೆ ಇಷ್ಟು ತ್ರಾಸಾಗಿರುವಾಗ ತಾನು ಮೊಬೈಲ್‌ನಲ್ಲಿ ಗೇಮ್ ಆಡುತ್ತಿರುವುದನ್ನು ನೋಡಿ ಅಜ್ಜಿ ಏನೆಂದುಕೊಂಡಾರೊ ಆಕೆಯ ಕೈಯಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದೆನೆಂಬ ಆತಂಕದಿಂದ ನಾಲಿಗೆ ಕಚ್ಚಿಕೊಂಡು; ಭಯದಿಂದಅಜ್ಜಿ ನೋಡು ಅಮ್ಮನಿಗೆ ಹೀಗೆ ಆಗಿ ಬಿಟ್ಟಿತು… ನಮಗೆಲ್ಲ ಇನ್ನು ಯಾರು ಗತಿ… ಎಂದು ಅಳುವವನಂತೆ ನಟಿಸುತ್ತಾ ರೇವತಿಗೆ ತೆಕ್ಕೆ ಬೀಳುತ್ತಾನೆ.
ರೇವತಿ ಅವನ ಬೆನ್ನನ್ನು ನೇವರಿಸುತ್ತಾ ಅಲ್ಲಾ ರಮೇಶ! ಇದೆಲ್ಲ ಹೇಗಾಯಿತು...? ಮನೆಯಲ್ಲಿ ನೀನಿರಲಿಲ್ಲವೇ? ರಂಜಿತಳು ಎದ್ದಿರಲಿಲ್ಲವೇ? ಇಬ್ಬರು ಮಕ್ಕಳು ಇದ್ದೂ ಯಾಕೆ ತಾಯಿಯನ್ನು ರಕ್ಷಿಸಲಿಲ್ಲ? ಎಂದು ಆಕ್ಷೇಪಿಸುವಂತೆ ಭಾರವಾದ ಧ್ವನಿಯಲ್ಲಿ ಕೇಳಿದಳು. ನಾನು ಮಲಗಿದ್ದೆ ಅಜ್ಜಿ… ರಂಜಿತಾಳೊ ಮಲಗಿದ್ದಳು… ಅಮ್ಮನ ಕಿರುಚಾಟ ಕೇಳಿ ನಾನು ದಡಬಡಿಸಿ ಎದ್ದು ಓಡಿ ಬಂದೆ… ನೋಡುತ್ತೇನೆ… ಅಮ್ಮಾನ ನೈಲಾನ ಸೀರೆಗೆ ಬೆಂಕಿ ತಗಲಿ ಆಕೆ ಧಗಧಗನೇ ಉರಿಯುತ್ತಿದ್ದಳು. ಅಷ್ಟರೊಳಗೆ ಅಮ್ಮನ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಸಹ ಓಡಿ ಬಂದರು. ನಾವೆಲ್ಲ ಸೇರಿ ಅಲ್ಲೇ ಬಕೇಟಿನಲ್ಲಿದ್ದ ನೀರನ್ನು ಹಾಕಿ ಬೆಂಕಿ ನಂದಿಸಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದೆವು…. ಬೇಕಾದರೆ ರಂಜಿತಳ ಹತ್ತಿರ ಕೇಳು… ತಾನು ಸುಳ್ಳು ಹೇಳುತ್ತಿರುವೆನೆಂದು ಅಜ್ಜಿ ತಿಳಿದುಕೊಳ್ಳ ಬಾರದೆಂದು ತಂಗಿಯ ಸಾಕ್ಷಿಗಾಗಿ ಹೇಳಿದ.
ಆದರೆ ರೇವತಿಗೆ ರಮೇಶನ ಮಾತುಗಳಲ್ಲಿ ಯಾವುದೇ ರೀತಿಯ ಅನೈಜತೆ ಕಾಣಿಸುವುದಿಲ್ಲ. ತನ್ನ ಮಗಳು ಬೆಳಿಗ್ಗೆ ಬೇಗ ಎದ್ದು ಸ್ನಾನಕ್ಕಾಗಿ ಒಲೆ ಉರಿಸುವುದು ರೂಢಿ. ಒಲೆಗೆ ಉರಿ ಹಚ್ಚುವಾಗ ಸೀರೆಗೆ ಬೆಂಕಿ ತಗಲಿದ್ದು ಗೊತ್ತಾಗಲಿಲ್ಲವೆಂದು ಕಾಣಿಸುತ್ತದೆ ಪಾಪ..! ಈ ಮಕ್ಕಳನ್ನು ಬೈದು ಏನು ಪ್ರಯೋಜನ? ಎಂದು ತೀರ್ಮಾನಿಸಿದ ರೇವತಿ ``ಏನು ಮಾಡಲಿಕ್ಕೆ ಆಗುತ್ತದೆ ಮಗಾ... ಎಲ್ಲಾ ಆಕೆಯ ಹಣೆಬರಹ... ಈ ರೀತಿಯ ನೋವು ತಿನ್ನಬೇಕೆಂದು ದೇವರು ಆಕೆಯ ಹಣೆಯಲ್ಲಿ ಬರೆದಿದ್ದಾನೇನೊ... ಆದರೆ ಇದೆಲ್ಲವನ್ನು ನೋಡಲು ದೇವರು ನನ್ನನ್ನೂ ಇನ್ನೂ ಬದುಕಿಸಿಟ್ಟಿದ್ದಾನಲ್ಲ; ಅದೇ ನನಗೆ ತುಂಬಾ ಕೆಟ್ಟದೆನಿಸುತ್ತದೆ. ರೇವತಿ ತನ್ನ ಕಣ್ಣೀರನ್ನು ಸೀರೆಯ ಸೆರಗಿನಿಂದ ಒರೆಸಿ ಕೊಂಡು ಸ್ವಲ್ಪ ದೂರ ಹೋಗಿ ಗೋಡೆಗೆ ಒರಗಿ ನಿಂತಳು. ರಮೇಶನು ಆಕೆಯ ಹತ್ತಿರವೇ ಬಂದು ``ಅಜ್ಜಿ ನಿನಗೆ ಸಕ್ಕರೆ ಕಾಯಿಲೆ ಇದೆ... ಬೆಳಿಗ್ಗೆ ಟಿಫನ್ ಮಾಡಿರುವಿಯಾ? ಇಲ್ಲದಿದ್ದರೆ ಹೇಳು ಇಲ್ಲಿಯೇ ಕ್ಯಾಂಟೀನ್ ಇದೆ ಹೋಗಿ ಇಡ್ಲಿ ತರುತ್ತೇನೆ... ಉಪಚರಿಸುವಂತೆ ನಟಿಸಿದ. ``ಬೇಡಪ್ಪ..! ಇಡ್ಲಿಯೂ ಬೇಡ ಏನೂ ಬೇಡ... ಅಶ್ವಿನಿಯ ಕಷ್ಟ ನೋಡಿದಾಗ ನೀರು ಕುಡಿಯುವುದು ಸಹ ಬೇಡವೆನಿಸುತ್ತಿದೆ... ಅನ್ನುತ್ತಾ ಹಾಗೆಯೇ ಕಣ್ಣು ಮುಚ್ಚಿಕೊಂಡಳು. ಆಕೆಯ ಮನಸ್ಸಿನ ಮುಂದೆ ಅಶ್ವಿನಿಯ ಗತ ಜೀವನದ ಪುಟಗಳು ತೆರೆದುಕೊಳ್ಳಲಾರಂಭಿಸಿದವು. ರೇವತಿ ಹಾಗೂ ರಾಮರಾಯರ ಎರಡು ಜನ ಮಕ್ಕಳಲ್ಲಿ ಅಶ್ವಿನಿ ಹಿರಿಯವಳು. ಎರಡನೆಯದು ಗಂಡು ಸಂತಾನ. ಅನಂತು ಅವನ ಹೆಸರು. ಅಶ್ವಿನಿ ಕಲಿಯುವುದರಲ್ಲಿ ಹೆಚ್ಚು ಜಾಣೆಯಲ್ಲ. ಪಿಯುಸಿಯಲ್ಲಿ ಮೂರ ಸಲ ಡುಮ್ಕಿ ಹೊಡೆದಳೇ ವಿನಃ ಎಲ್ಲಾ ವಿಷಯಗಳನ್ನು ಪಾಸು ಮಾಡಿಕೊಳ್ಳಲಾಗಲಿಲ್ಲ. ಇದರಿಂದ ಆಕೆಯ ತಂದೆ ತಾಯಿ ಇಬ್ಬರಿಗೂ ಬೇಸರ ಬಂದುನೀನು ಕಲಿತದ್ದು ಸಾಕು ಎಂದು ಮನೆ ಕೆಲಸ ಕಲಿಸಲು ಆರಂಭಿಸುತ್ತಾರೆ. ಶಿಕ್ಷಣ ಬಿಟ್ಟು ಇತರ ಮನೆವಾರ್‍ತೆಯ ಕೆಲಸದಲ್ಲಿ ಅಂದರೆ ರುಚಿ ರುಚಿಯಾಗಿ ಅಡುಗೆ ಮಾಡುವುದು, ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರಲ್ಲಿ ಅಶ್ವಿನಿ ತುಂಬಾ ಜಾಣೆಯಾಗಿದ್ದಳು. ಆ ಕಾರಣದಿಂದ ರೇವತಿಯ ದೂರದ ಸಂಬಂಧಿ ಸುಮತಿ ತನ್ನ ಗಂಡನ ಅಕ್ಕನ ಮಗನಿಗಾಗಿ ರೇವತಿಯ ಮನೆಗೆ ನೆಂಟಸ್ತಿಕೆಗೆ ಬಂದು ಅವರಿಂದ ಆಯಿತು.... ಎಂದು ಒಪ್ಪಿಗೆ ಪಡೆದುಕೊಂಡೇ ಹೋಗುತ್ತಾಳೆ. ಆಕೆಯ ಅಕ್ಕನ ಗಂಡ ಹನುಮಂತರಾಯರು ಶಿರಸಿಯಲ್ಲಿ ದೊಡ್ಡ ಅಡಿಕೆ ವ್ಯಾಪಾರಿಗಳು. ಮಾರ್ಕೇಟಿನಲ್ಲಿ ಅವರದೇ ದೊಡ್ಡ ಅಡಿಕೆ ಮಂಡಿಯೂ ಇತ್ತು. ಅಶ್ವಿನಿಗೆ ಮದುವೆಯಾಗುವ ಆ ಕಾಲದಲ್ಲಿಯೇ ವರ್ಷಕ್ಕೆ ಲಕ್ಷಗಟ್ಟಲೆ ಲಾಭ ಪಡೆಯುತ್ತಿದ್ದ ದೊಡ್ಡ ಕುಳ. ಅವರಿಗೆ ರಾಜೇಶ ಮತ್ತು ನಾಗೇಶ ಎಂಬ ಇಬ್ಬರು ಗಂಡು ಮಕ್ಕಳು. ರಾಜೇಶನಿಗೆ ಡಾಕ್ಟರಿಕೆ ಕಲಿಸ ಬೇಕೆಂಬ ಆಸೆ ಹನುಮಂತರಾಯರಿಗಿದ್ದರೂ ಪಿಯುಸಿಯಲ್ಲಿ ಅವನಿಗೆ ನಲವತ್ತು ಪರ್ಸೆಂಟಿಗಿಂತ ಕಡಿಮೆ ಮಾರ್ಕ್ಸ್‌ಗಳು ಬಂದಿದ್ದರಿಂದ ಎಂ.ಬಿ.ಬಿ.ಎಸ್.ಗೆ ಮಾತ್ರವಲ್ಲ ಬಿ.ಇ. ಕಲಿಯಲು ಸಹ ಸೀಟು ಸಿಗಲಿಲ್ಲ. ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಎಂ.ಬಿ.ಬಿ.ಎಸ್. ಆಥವಾ ಬಿ.ಇ. ಸೀಟು ಖರೀದಿಸುವಷ್ಟು ತಾಕತ್ತು ಹನುಮಂತರಾಯರಿಗಿದ್ದರೂ ರಾಜೇಶನೇ ಮನಸ್ಸು ಮಾಡಲಿಲ್ಲ. ತಂದೆಯ ವ್ಯವಹಾರದಲ್ಲಿ ತಾನೂ ಸೇರಿ ಕೊಂಡ. ಸುಮತಿ ವೈನಿಯ ರಾಯಭಾರದಿಂದ ಅಶ್ವಿನಿಯ ಮದುವೆ ರಾಜೇಶನೊಂದಿಗೆ ಸಂಪನ್ನಗೊಂಡಿತು. ಹನುಮಂತರಾಯರ ಹೆಂಡತಿ ರಾಜೇಶನ ಮದುವೆಗಿಂತ ತುಂಬಾ ಮೊದಲೇ ತೀರಿಕೊಂಡಿದ್ದರಿಂದ ಲಗ್ನವಾಗಿ ಗಂಡನ ಮನಗೆ ಬರುತ್ತಿದ್ದಂತೆ ಮನೆವಾರ್‍ತೆಯ ಎಲ್ಲಾ ಜವಾಬ್ದಾರಿಗಳು, ಮನೆಯೊಳಗಿನ ಯಜಮಾನಿಕೆಯ ಜವಾಬ್ದಾರಿಯೂ ಸಹ ಆಕೆಯ ಮೇಲೆ ಬಿತ್ತು. ಅಲ್ಲಿಂದ ಎರಡು ವರ್ಷದೊಳಗೆ ಹನುಮಂತರಾಯರೂ ಸಹ ಕಣ್ಣು ಮುಚ್ಚಿದರು. ಕಿರಿಯವನಾದ ನಾಗೇಶನ ಓದು ಧಾರವಾಡದಲ್ಲಿ ಆಗುತ್ತಿತ್ತು. ಅವನು ಧಾರವಾಡದಲ್ಲಿ ಬಿ.ಕಾಂ. ಕಲಿಯುತ್ತಿದ್ದ. ಕಲಿಕೆಯ ನಂತರ ಅವನೂ ಅಣ್ಣನೊಂದಿಗೆ ಅಡಿಕೆಯ ವ್ಯಾಪಾರಕ್ಕೇ ಇಳಿದು ಬಿಟ್ಟ. ಅಶ್ವಿನಿಯ ತಮ್ಮ ಅನಂತು ಅಕ್ಕನಂತಲ್ಲ. ಕಲಿಯುವುದರಲ್ಲಿ ತುಂಬಾ ಜಾಣ. ಪಿಯುಸಿಯಲ್ಲಿ ತೊಂಬತ್ತಾರು ಶೇಕಡಾ ಮಾರ್ಕ್ಸ್ ಪಡೆದು ಮೆರಿಟ್ ಮೇಲೆ ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಮಾಡಿದನು. ಬಿ.ಇ.ದಲ್ಲೂ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಪಡೆದನು. ಅವನಿಗೆ ಸುಲಭವಾಗಿ ಒಂದು ಅಂತರ್ರಾಷ್ಟ್ರೀಯ ಕಂಪನಿಯಲ್ಲಿ ದೊಡ್ಡ ಹುದ್ದೆಯೂ ಸಿಕ್ಕಿತು. ತರಬೇತಿಗಾಗಿ ಅಮೇರಿಕಕ್ಕೆ ಹೋದ ಅನಂತು ಅಲ್ಲಿಯ ಹುಡುಗಿಯೊಬ್ಬಳನ್ನು ಮದುವೆಯಾಗಿ ಅಲ್ಲಿಯೇ ಉಳಿದುಬಿಟ್ಟನು. ಈ ಆಘಾತದಿಂದ ಅಶ್ವಿನಿಯ ತಂದೆ ಮಗ ಕೈ ತಪ್ಪಿ ಹೋದನಲ್ಲ ಎಂದು ಕೊರಗಿ ಕೊರಗಿ ಕಣ್ಣು ಮುಚ್ಚಿದರು. ಅಲ್ಲಿಂದ ರೇವತಿಗೂ ಸಹ ಮಗಳು ಅಶ್ವಿನಿಯೊಬ್ಬಳೇ ಆಧಾರವಾಗಿ ಬಿಟ್ಟಳು. ತವರು ಮನೆ, ಗಂಡನ ಮನೆಯ ಯಾವುದೇ ಸಮಸ್ಯೆಗೆ ಆಕೆಯೇ ಹೆಗಲುಕೊಡತೊಡಗಿದಳು.. ಪ್ರಾಯಕ್ಕೆ ಬಂದ ನಾಗೇಶನನ್ನು ಸಂಸಾರಿಗನನ್ನಾಗಿ ಮಾಡಲು ಅಶ್ವಿನಿ ಸಾಗರದ ಹತ್ತಿರದ ಶಿರವಂತೆಯಿಂದ ಒಂದು ಹೆಣ್ಣನ್ನು ತಂದು ಆತನ ಮದುವೆಯನ್ನೂ ಮಾಡಿಸಿದಳು. ನಾಗೇಶನ ಹೆಂಡತಿಯ ಹೆಸರು ಅನುರಾಧಾ. ಆಕೆ ಎಂ.ಕಾಂ. ತನಕ ಕಲಿತಿದ್ದಳು. ಆಕೆ ಆಧುನಿಕ ಮನೋಭಾವದವಳಾಗಿದ್ದಳು. ಮನೆಯಲ್ಲಿ ಪೂಜೆ, ಪುನಸ್ಕಾರ, ರಂಗೋಲಿ ಹಾಕುವುದು ಇತ್ಯಾದಿ ಕಾರ್ಯಗಳನ್ನು ಆಕೆ ಮೂಢನಂಬಿಕೆ ಎನ್ನುತ್ತಿದ್ದಳು. ಮನೆಗೆ ಬಂದ ಸುಮಂಗಲಿಯರಿಗೆ ಉಡಿ ತುಂಬಿದರೆ ನಷ್ಟ ಎನ್ನುತ್ತಿದ್ದಳು. ದೇವರ ಡಬ್ಬಿಗೆ ಕಾಣಿಕೆ ಹಾಕುವದು ಸಹ ಆಕೆಗೆ ವ್ಯರ್ಥವೆನಿಸುತ್ತಿತ್ತು. ಟಿ.ವಿ. ಸೀರಿಯಲ್‌ಗಳನ್ನು ಕಂಡು ತಾನು ಹಾಗೂ ತನ್ನ ಗಂಡ ಇಬ್ಬರೇ ಹಕ್ಕಿಯಂತೆ ಹಾರಾಡ ಬೇಕು, ಮೀನಿನಂತೆ ಈಜಾಡ ಬೇಕು ಎಂದೆಲ್ಲ ಕನಸು ಕಟ್ಟಿಕೊಂಡ ಹುಡುಗಿ. ಆಕೆಗೆ ಅಶ್ವಿನಿ ಮಾಡುತ್ತಿರುವ ಸಂಪ್ರದಾಯಗಳು ಬಂಧನವಾಗ ತೊಡಗಿದವು. ಆದ್ದರಿಂದ ನಾಗೇಶನು ಮದುವೆಯಾಗಿ ಆರು ತಿಂಗಳೊಳಗೆ ಆಸ್ತಿಯಲ್ಲಿನ ತನ್ನ ಪಾಲನ್ನು ಪಡೆದು ಕೊಂಡು ಬೇರೆ ಮನೆ ಮಾಡಿದ. ಅಷ್ಟರೊಳಗೆ ಅಶ್ವಿನಿಗೆ ಸಹ ಎರಡು ಮಕ್ಕಳಾಗಿದ್ದವು. ದೊಡ್ಡದು ಗಂಡು ಮಗು. ಅವನೇ ರಮೇಶ. ಎರಡನೆಯವಳು ರಂಜಿತಾ. ಅಶ್ವಿನಿ ತನ್ನ ಎರಡು ಮಕ್ಕಳನ್ನು ಎರಡು ಕಣ್ಣುಗಳಂತೆ ಪ್ರೀತಿಸುತ್ತಾ ಬಂದಿದ್ದಾಳೆ. ನಾಗೇಶನು ಬೇರೆ ಮನೆ ಮಾಡಿಕೊಂಡು ಹೋಗುವಾಗ ರಮೇಶ ಎರಡನೆಯ ಇಯತ್ತೆಯಲ್ಲಿ ಹಾಗೂ ರಂಜಿತಾ ಯು.ಕೆ.ಜಿ.ಯಲ್ಲಿ ಓದುತ್ತಿದ್ದರು. ರಮೇಶನು ಎಂಟನೇ ಕ್ಲಾಸಿನಲ್ಲಿ ಕಲಿಯುತ್ತಿದ್ದಾಗ ಸಕ್ಕರೆಕಾಯಿಲೆ ಇದ್ದ ರಾಜೇಶನಿಗೆ ಆಕಸ್ಮಿಕವಾಗಿ ಮೂತ್ರದ ಸಮಸ್ಯೆ ಕಂಡು ಬಂತು. ಶಿರಸಿಯಲ್ಲಿ ಎಷ್ಟು ಔಷದೋಪಚಾರ ಮಾಡಿದರೂ ಕಾಯಿಲೆ ಗುಣವಾಗದಿದ್ದಾಗ ಹುಬ್ಬಳ್ಳಿಗೆ ಕರೆದೊಯ್ದು ದೊಡ್ಡಾಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಆತನ ಎರಡೂ ಕಿಡ್ನಿಗಳು ಹಾಳಾಗಿವೆ ಎಂದು ತಿಳಿಯಿತು. ಅವನ ರಿಪೋರ್ಟ್ ತರಿಸಿ ಚಿಕಿತ್ಸೆ ಆರಂಭಿಸ ಬೇಕೆನ್ನುವಷ್ಟರಲ್ಲಿ ಆತ ಅಸುನೀಗಿಬಿಟ್ಟ. ಅಶ್ವಿನಿಗಂತು ಆಕಾಶವೇ ಕಳಚಿ ತನ್ನ ತಲೆಯ ಮೇಲೆ ಬಿದ್ದಂತಾಗುತ್ತದೆ. ರೇವತಿಗಂತೂ ತನ್ನ ಮಗಳು ಈ ಆಘಾತದಿಂದ ಹೊರಗೆ ಬರಬಹುದೆಂಬ ನಂಬಿಕೆಯೂ ಸಹ ಇರಲಿಲ್ಲ. ಆದರೆ ಮನೆತನ ಹಾಗೂ ವ್ಯಾಪಾರ ಎರಡನ್ನೂ ತೂಗಿಕೊಂಡು ಹೋಗುವ ಮಹತ್ತರವಾದ ಜವಾಬ್ದಾರಿ ಆಕೆಯ ಮೇಲೆ ಬಿದ್ದಿದ್ದರಿಂದ ಆಕೆಗೆ ಗಂಡನ ಸಾವಿನಿಂದಾದ ಆಘಾತದಿಂದ ಹೊರಗೆ ಬಾರದೇ ಬೇರೆ ವಿಧಿಯೇ ಇರಲಿಲ್ಲ. ಅಶ್ವಿನಿ ಸಾಮಾನ್ಯ ಹೆಂಗಸು ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ವ್ಯಾಪಾರ ನಡೆಸುವ ಜಾಣ್ಮೆಯೂ ಆಕೆಗೆ ಇರಲಿಲ್ಲಾ... ಮಕ್ಕಳು ಸಹ ಚಿಕ್ಕವರು... ಕೆಲಸದವರನ್ನು ನಂಬಿ ಇಷ್ಟೊಂದು ದೊಡ್ಡ ವ್ಯವಹಾರವನ್ನು ನಡೆಸಿ ಕೊಂಡು ಹೋಗಲೂ ಸಹ ಆಕೆಯಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಕುಟುಂಬದ ಹಿರಿಯರೆಲ್ಲರೂ ಸೇರಿ ವಿಚಾರ ವಿನಿಮಯ ನಡೆಸಿಅಡಿಕೆ ಮಂಡಿಯನ್ನು ಬೇರೆಯವರಿಗೆ ನಡೆಸಲು ಕೊಡಬೇಕೆಂದು. ಅದರಿಂದ ಪ್ರತಿ ತಿಂಗಳೂ ಅಶ್ವಿನಿಗೆ ನಿಯಮಿತ ಉತ್ಪನ್ನ ಬರುವಂತೆ ಮಾಡಬೇಕೆಂದು ತೀರ್ಮಾನಿಸಿದರು. ತಾನೇ ಅಡಿಕೆ ಮಂಡಿಯನ್ನು ವಹಿಸಿಕೊಂಡರೆ ಮುಂದೆ ಏನಾದರೂ ತಕರಾರು ಬರಬಹುದೆಂದು ಹೆದರಿ ನಾಗೇಶನು ನಡೆಸಲು ಮುಂದೆ ಬರುವುದಿಲ್ಲ. ಕೊನೆಗೆ ರಾಜೇಶನ ದೊಡ್ಡಪ್ಪನ ಮಗ ವೆಂಕಟನು ಅಡಿಕೆ ಮಂಡಿಯನ್ನು ವಹಿಸಿಕೊಳ್ಳಲು ಮುಂದೆ ಬಂದ. ಪ್ರತಿ ತಿಂಗಳು ಆತ ಅಶ್ವಿನಿಗೆ ಮೂವತ್ತು ಸಾವಿರ ರೂಪಾಯಿಗಳನ್ನು ಕೊಡಬೇಕು ಹಾಗೂ ವರ್ಷಕ್ಕೊಮ್ಮೆ ಶೇಕಡಾ ಹತ್ತರಂತೆ ಹೆಚ್ಚಿಗೆ ಭಾಡಿಗೆ ಕೊಡಬೇಕೆಂದು ಕರಾರು ಮಾಡಿಕೊಂಡರು.
ಮನೆಗೆ ಹಣ ಬರುತ್ತಿತ್ತು. ವಾಸಕ್ಕೆ ವಿಶಾಲವಾದ ಮನೆ ಇತ್ತು. ಮತ್ತೇನು ಬೇಕು ಸಂತೋಷದಿಂದಿರಲು? ಗಂಡನಿಲ್ಲವಲ್ಲ ಎಂಬ ಕೊರಗಿದ್ದರೂ ಮಕ್ಕಳ ಮುಖ ನೋಡಿ ಅಶ್ವಿನಿ ಅದನ್ನು ಮರೆಯುತ್ತಿದ್ದಳು. ಮತ್ತು ತಂದೆ ಇಲ್ಲದ ಮಕ್ಕಳೆಂಬ ಕನಿಕರದಿಂದ ಸ್ವಲ್ಪ ಹೆಚ್ಚೇ ಸದರವನ್ನೂ ಕೊಟ್ಟಿದ್ದಳು. ಅವರು ಬೇಡಿದ್ದನ್ನೆಲ್ಲಾ ಕ್ಷಣ ಮಾತ್ರದಲ್ಲಿ ಅವರ ಮುಂದಿರುತ್ತಿತ್ತು. ಆದರೆ ಮಕ್ಕಳು ಮಾತ್ರ ತಾಯಿಯ ಈ ಅತಿ ಮಮತೆಯನ್ನು ದುರುಪಯೋಗ ಪಡಿಸಿಕೊಂಡರು.
ರಂಜಿತಾ ಕಾಲೇಜಿಗೆ ಹೋಗಿ ಬರುವಾಗ ಬೇಸಿಗೆ ಕಾಲದಲ್ಲಿ ತುಂಬಾ ಒದ್ದಾಡುತ್ತಿದ್ದಳು. ಆ ಕಾರಣದಿಂದ ಅಶ್ವಿನಿ ಆಕೆಯನ್ನು ಕರೆದೊಯ್ಯಲು ಒಂದು ಆಟೋರಿಕ್ಷಾವನ್ನು ಗೊತ್ತು ಮಾಡಿದ್ದಳು. ಪ್ರತಿದಿನ ರಂಜಿತ ಅದೇ ರಿಕ್ಷಾದಲ್ಲಿ ಕಾಲೇಜಿಗೆ ಹೋಗಿ, ಬರುತ್ತಿದ್ದರಿಂದ ರಿಕ್ಷಾ ಡ್ರೈವರ್ ಹಾಗೂ ರಂಜೀತಾಳ ಮಧ್ಯೆ ಪ್ರೇಮಾಂಕುರವಾಯಿತು. ಆತನ ಹೆಸರು ಮಂಜುನಾಥ. ಆತನನ್ನು ಬಿಟ್ಟಿರಲಾರದಷ್ಟು ಆಳವಾಗಿ ರಂಜೀತಾ ಆತನ ಪ್ರೀತಿಯ ಬಲೆಯಲ್ಲಿ ಸಿಲುಕಿದಳು. ಅಶ್ವಿನಿಗೆ ಈ ವಿಷಯ ತಿಳಿಯುವುದರೊಳಗೆ ತುಂಬಾ ವಿಳಂಬವಾಗಿ ಬಿಟ್ಟಿತು, ರಂಜಿತಾ ತಾನು ಮದುವೆಯಾದರೆ ಆತನನ್ನೇ ಮದುವೆಯಾಗುವುದು ಇಲ್ಲದಿದ್ದರೆ ಯಾವುದಾದರೂ ಕೆರೆ ಬಾವಿ ನೋಡಿ ಕೊಳ್ಳುತ್ತೇನೆ. ಎಂದು ತಾಯಿಯನ್ನು ಹೆದರಿಸ ತೊಡಗಿದಳು. ಆಗ ತವರು ಮನೆಗೆ ಓಡಿ ಬಂದ ಅಶ್ವಿನಿ ತಾಯಿಯ ತೊಡೆಯ ಮೇಲೆ ತಲೆ ಇಟ್ಟು ಆಮ್ಮಾ! ನನಗೆ ಎಂಥಹ ಪರಿಸ್ಥಿತಿ ಬಂತು ನೋಡು. ಇವಳು ತನ್ನ ಜೀವನವನ್ನು ಈ ರೀತಿಯ ಹೊಲಸು ಮಾಡಿ ಕೊಳ್ಳುತ್ತಾಳೆಂದು ನಾನು ಕನಸು-ಮನಸಿನಲ್ಲೂ ಎಣಿಸಿರಲಿಲ್ಲ. ಈಗ ಬಂಧು-ಮಿತ್ರರ ಮುಂದೆ ನನ್ನ ಪರಿಸ್ಥಿತಿ ಹೇಗಾಗಿರ ಬೇಡ. ಅವರೆಲ್ಲರ ಮುಂದೆ ತಲೆ ಎತ್ತಿ ಬದುಕದಂತೆ ಮಾಡಿ ಬಿಟ್ಟಳು ಈಕೆ. ತಂದೆ ಇಲ್ಲದ ಮಕ್ಕಳೆಂದು ಸ್ವಲ್ಪ ಹೆಚ್ಚು ಪ್ರೀತಿ ತೋರಿದ್ದೆ ತಪ್ಪಾಯಿತೇ? ಎನ್ನುತ್ತಾ ಗೋಳೋ ಎಂದು ಅತ್ತಿರುವುದು ರೇವತಿಗಿನ್ನೂ ನೆನಪಿದೆ. ಯಾರೇ ಬುದ್ಧಿವಾದ ಹೇಳಿದರೂ ಕೇಳದೆ ರಂಜಿತಾ ತಾನು ಪ್ರೀತಿಸಿದ ಹುಡುಗನೊಂದಿಗೆ ಧರ್ಮಸ್ಥಳಕ್ಕೆ ಓಡಿ ಹೋಗಿ ಲಗ್ನ ಮಾಡಿಕೊಂಡು ಬಂದಳು.ತಾನು ಗೆದ್ದೆ… ನಿನ್ನಿಂದ ಏನೂ ಮಾಡಲಿಕ್ಕಾಗಲಿಲ್ಲ… ಎಂದು ಬಂದು ತಾಯಿಯನ್ನು ಅಣುಕಿಸಿದಳು. ಆದರೆ ರಂಜಿತಾಳ ಆ ಗರ್ವ ಹೆಚ್ಚು ದಿವಸ ಉಳಿಯಲಿಲ್ಲ್ಲ. ಯಾಕೆಂದರೆ ಆ ಹುಡುಗನಿಗೆ ಮೊದಲೇ ಬೇರೊಬ್ಬಳು ವಿಧವೆಯೊಡನೆ ಸಂಬಂಧವಿತ್ತಂತೆ. ಆಸ್ತಿಯ ಆಸೆಯಿಂದ ಆತ ರಂಜಿತಾಳನ್ನು ಬುಟ್ಟಿಗೆ ಹಾಕಿಕೊಂಡಿದ್ದನಂತೆ. ಈ ವಿಷಯ ರಂಜಿತಾಳಿಗೆ ತಿಳಿಯುವಷ್ಟರೊಳಗೆ ಆಕೆಯ ಜೀವನದ ಪ್ರಥಮ ಅಧ್ಯಾಯ ಮುಗ್ಗರಿಸಿ ಹೋಗಿತ್ತು. ಹ್ಯಾಪುಮೋರೆ ಹಾಕಿಕೊಂಡು ತಾಯಿಯ ಹತ್ತಿರ ಬಂದು ತಾನು ಮಾಡಿದ್ದು ತಪ್ಪಾಯಿತೆಂದು ಆಕೆಯ ಕಾಲು ಹಿಡಿದು ಅತ್ತಳು. ಮಗಳಲ್ಲವೇ ಎಂದು ಅಶ್ವಿನಿ ಸಂತೈಸಲು ಹೋದಾಗ ಆತ ನನಗೆ ಮೋಸ ಮಾಡಿದ್ದಾನೆ... ನಾನು ಕೋರ್ಟಿಗೆ ಹೋಗುತ್ತೇನೆ... ಆತನನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದೆಲ್ಲ ರಂಜೀತಾ ಬೊಬ್ಬೆ ಹೊಡೆದಳು. ಅಶ್ವಿನಿ ಮಗಳು ರಂಜಿತಳನ್ನು ಕರೆದುಕೊಂಡು ಪರಿಚಯದ ವಕೀಲರೊಬ್ಬರ ಹತ್ತಿರ ಹೋದಾಗ ಆ ಹುಡುಗನ ಬಗ್ಗೆ ಎಲ್ಲಾ ಮಾಹಿತಿಯನ್ನು ತರಿಸಿಕೊಂಡ ಅವರುಅವನ ವಿರುದ್ಧ ಕೋರ್ಟಿಗೆ ಹೋದರೆ ನಿಮಗೆ ಏನೂ ಉಪಯೋಗವಿಲ್ಲ…ಯಾಕೆಂದರೆ ಆತ ಸಂಬಂಧ ಇರಿಸಿಕೊಂಡಿರುವುದು ಒರ್ವ ವಿವಾಹ ವಿಚ್ಛೇದಿತೆಯೊಂದಿಗೆ. ಆಕೆಯ ವಿಚ್ಛೇದಿತ ಪತಿಯಿಂದ ಆಕೆಗೆ ಪ್ರತಿ ತಿಂಗಳು ಹದಿನಾರು ಸಾವಿರ ರೂಪಾಯಿ ಜೀವನಾಂಶ ಬರುತ್ತಿದೆ. ಆಕೆ ಕೋರ್ಟಿಗೆ ಬಂದು ಈತನೊಂದಿಗೆ ತನಗೆ ಸಂಬಂಧವಿದೆ ಎಂದು ಹೇಳಿಕೊಂಡರೆ ಆ ಜೀವನಾಂಶ ನಿಂತುಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಕೆ ಕೋರ್ಟಿಗೆ ಸಾಕ್ಷಿ ಹೇಳಲು ಬರಲಾರಳು. ಅವರಿಬ್ಬರಿಗೆ ಮದುವೆಯಾಗಿದೆ ಎಂದು ತೋರಿಸುವಂತಹ ಯಾವುದೇ ಸಾಕ್ಷಿಯೂ ಸಹ ನಿಮ್ಮಲ್ಲಿ ಇಲ್ಲ. ಅಕ್ರಮ ಸಂಬಂಧ ಇದೆ ಎಂದು ಸಿದ್ಧ ಮಾಡಲು ಸಹ ಸಾಧ್ಯವಿಲ್ಲ. ಸಾಕ್ಷಿಯೇ ಇಲ್ಲದೆ ಕೇಸನ್ನು ಹೇಗೆ ಗೆಲ್ಲಲಾಗುತ್ತದೆ? ಇದರಿಂದ ನಿಮ್ಮ ವೇಳೆ ಮತ್ತು ಹಣ ಮಾತ್ರ ವ್ಯರ್ಥವಾಗುತ್ತದೆ. ಅದರ ಬದಲು ಯಾರಾದರು ಹಿರಿಯರನ್ನು ಸೇರಿಸಿ ಪಂಚಾಯತಿ ಮಾಡುವುದು ಒಳ್ಳೆಯದು. ಎಂದು ಇವರ ಮನಮುಟ್ಟುವಂತೆ ಹೇಳಿದರು. ಇದರಿಂದ ಅಶ್ವಿನಿಗೆ ತಂಬಾ ಬೇಸರವಾದರೂ ಮಾಡಿದ್ದುಣ್ಣೋ ಮಹಾರಾಯಾ... ಎಂಬಂತೆ ಸುಮ್ಮನಾದಳು. ಆದರೆ ರಂಜೀತಾ ಅಲ್ಲಿಗೆ ಸುಮ್ಮನಾಗುವುದಿಲ್ಲ ಮೋಸಮಾಡಿ ತನ್ನನ್ನು ಮದುವೆಯಾದ ಮಂಜುನಾಥನಿಗೆ ಒಂದು ಗತಿ ಕಾಣಿಸಿಯೇ ಬಿಡಬೇಕೆಂದು ಬೇರೆ ಮೂರ್‍ನಾಲ್ಕು ಲಾಯರುಗಳನ್ನು ಭೇಟಿಯಾದಳು. ಆದರೆ ಎಲ್ಲರೂ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಈಕೆಯನ್ನು ನಿರಾಶೆಗೊಳಿಸಿ ವಾಪಸು ಕಳಿಸಿದರು. ಕೊನೆಗೆ ಎರಡೂ ಕಡೆಯ ಹಿರಿಯರನ್ನು ಕೂಡಿಸಿ ನ್ಯಾಯ ಪಂಚಾಯತಿ ಮಾಡಿದರು. ಆದರೆ ಮಂಜುನಾಥ ತುಂಬಾ ಬಡವ. ಆತನ ಉತ್ಪನ ಹೆಚ್ಚೆಂದರೆ ದಿವಸಕ್ಕೆ ಐನೂರು ರೂಪಾಯಿ. ಅದರಲ್ಲಿ ಆತ ತನ್ನ ತಂದೆ ತಾಯಿಯರನ್ನೂ ಸಾಕಬೇಕಾಗಿತ್ತು. ಇರಲು ಸ್ವಂತ ಮನೆ, ಹೊಲ ಎಂದು ಆತನಿಗೆ ಏನೂ ಇಲ್ಲ ಎನ್ನುವುದು ತಿಳಿಯುತ್ತದೆ. ಆಗ ಪಂಚಾಯಿತಿದಾರರು ಆತನಿಗೆ ಆ ಮಹಿಳೆಯ ಸಹವಾಸ ಬಿಟ್ಟು ರಂಜಿತಾಳನ್ನು ಕರೆದುಕೊಂಡು ಸಂಸಾರ ಮಾಡುವಂತೆ ಹೇಳಿದರು. ಅದಕ್ಕೆ ಆತರಂಜಿತಾಳನ್ನು ಬೇಕಾದರೆ ಕರೆದುಕೊಂಡು ಹೋಗುತ್ತೇನೆ, ಯಾಕೆಂದರೆ ನಾನು ಆಕೆಯ ಕುತ್ತಿಗೆಗೆ ತಾಳಿ ಕಟ್ಟಿದ್ದೇನೆ. ಆದರೆ ಆ ಹೆಂಗಸಿನ ಸಂಬಂಧ ಕಡಿದುಕೊಳ್ಳಲಾರೆ. ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟ.
ಆತ ಆ ಹೆಂಗಸಿನ ಸಂಬಂಧ ಕಡಿದುಕೊಳ್ಳದಿದ್ದರೆ ತಾನು ಆತನೊಂದಿಗೆ ಹೋಗುವುದಿಲ್ಲ.. ಎಂದು ರಂಜಿತಾಳೂ ಹಠ ಹಿಡಿದಳು. ಕೊನೆಗೆ ಪಂಚಾಯಿತಿದಾರರು ಆ ಹುಡುಗ ಪ್ರತಿ ತಿಂಗಳು ರಂಜಿತಳಿಗೆ ಐದೂವರೆ ಸಾವಿರ ರೂಪಾಯಿಗಳ ಜೀವನಾಂಶ ಕೊಡಬೇಕೆಂಬ ತೀರ್ಮಾನ ಮಾಡಿದರು. ಇದಕ್ಕೆ ಮಂಜುನಾಥ ಹಾಗೂ ಆತನ ತಾಯಿ ತಂದೆ ಸಹ ಒಪ್ಪಿದರು. ಮುಂದೆ ಪೋಲೀಸ್ ಠಾಣೆ, ಕೋರ್ಟ್ ಎಂದೆಲ್ಲ ಅಲೆಯುವುದಕ್ಕಿಂತ ಅವರಿಗೆ ಇದೇ ಸರಳವೆನಿಸಿತು. ರಂಜಿತಾ ತನ್ನ ಗಂಟುಮೂಟೆ ಕಟ್ಟಿಕೊಂಡು ತವರು ಮನೆಗೆ ಬಂದಳು. ಇದರಿಂದ ಸ್ವಲ್ಪ ದುಃಖಿತನಾದವನೆಂದರೆ ಆಕೆಯ ತಮ್ಮ ರಮೇಶ.
ರಮೇಶ ಎಸ್.ಎಸ್.ಎಲ್.ಸಿ.ಗೆ ಬರುವುದರಷ್ಟರಲ್ಲಿ ಫಟಿಂಗ ಹುಡುಗರ ಸ್ನೇಹ ಮಾಡಿ ತುಂಬಾ ಕೆಟ್ಟು ಹೋಗಿದ್ದ. ಕುಡಿಯುವುದು, ಜೂಜಾಡುವುದನ್ನು ಮಾಡುತ್ತಿದ್ದ. ಹೊಡೆದಾಟದ ಕೇಸಿನಲ್ಲೊಮ್ಮೆ ಜೇಲಿಗೂ ಹೋಗಿ ಬಂದಿದ್ದ. ಅವನಿಗೆ ಅಶ್ವಿನಿ ಪಾಕೇಟು ಮನಿ ಎಂದು ಎಷ್ಟು ಹಣ ಕೊಟ್ಟರೂ ಸಾಲುತ್ತಿರಲಿಲ್ಲ. ಈಗ ತಂಗಿ ರಂಜಿತ ಜೀವನಪೂರ್ತಿ ತವರು ಮನೆಯಲ್ಲಿಯೆ ಉಳಿಯುತ್ತಾಳೆ. ಮಂಜುನಾಥ ಕೊಡುವ ಐದುವರೆ ಸಾವಿರದಿಂದ ಏನಾಗುತ್ತದೆ. ಆಕೆಯ ಎಲ್ಲಾ ಖರ್ಚನ್ನು ನಾವೇ ನೋಡಬೇಕು. ಈಗ ತಾಯಿ ನೋಡಿಕೊಳ್ಳ ಬಹುದು, ಅವಳ ಕಾಲದ ನಂತರ ನಾನೇ ತಾನೆ ಆಕೆಯನ್ನು ನೋಡಿ ಕೊಳ್ಳಬೇಕು. ಈ ಪೀಡೆಯನ್ನು ಜೀವಮಾನ ಪೂರ್ತಿ ಸಾಕುವ ಕರ್ಮ ನನಗೇಕೆ? ಅಲ್ಲದೇ ತಾಯಿ, ಮಗಳು ಸೇರಿಕೊಂಡು ತನ್ನ ಬುಡಕ್ಕೆ ಬಂದರೆ, ತನ್ನ ಮೋಜು-ಮೇಜವಾನಿಗೆ ಅಡ್ಡಿಯಾದರೆ ಎನ್ನುವ ಆತಂಕವೂ ಆತನಿಗಿತ್ತು. ಆ ಕಾರಣದಿಂದ ಆತ ದುಃಖಿತನಾಗಿದ್ದ. ಅಲ್ಲದೇ ಪ್ರತಿ ತಿಂಗಳು ತಂಗಿಗೆ ಇಂತಿಷ್ಟು ಎಂದು ದುಡ್ಡು ಬರುತ್ತಿದೆ ಆದರೆ ತಾನು ದುಡ್ಡಿಗಾಗಿ ಆಮ್ಮನ ಮುಂದೆ ಭಿಕ್ಷುಕನಂತೆ ಕೈ ಚಾಚಿ ಬೇಡ ಬೇಕು ಅನ್ನುವ ಕೀಳರಿಮೆಯು ಸಹ ಅತನಿಗೆ ಮುಜುಗರ ತರುತ್ತಿತ್ತು., ರಮೇಶ ತಾಯಿಯ ಹತ್ತಿರ ಜಗಳ ಮಾಡತೊಡಗಿದ.ತಂಗಿ ಹೇಗಿದ್ದರೂ ಮದುವೆ ಮಾಡಿಕೊಂಡಿದ್ದಾಳೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ. ಆಕೆಯನ್ನು ಮನೆಯಿಂದ ಹೊರಹಾಕು, ಎಲ್ಲಿಗೆ ಬೇಕಾದರೂ ಹೋಗಿ ಸಾಯಲಿ ಮತ್ತು ಅಂಗಡಿಯಿಂದ ಬರುವ ಹಣದಲ್ಲಿ ಅರ್ಧ ಪಾಲನ್ನು ತನಗೆ ಕೊಡು ಎನ್ನುವುದೇ ಅವನ ಒತ್ತಾಯ. ಇದಕ್ಕೆ ಅಶ್ವಿನಿ ಒಪ್ಪದಿದ್ದಾಗ ಮೊದಲು ಜಗಳಕ್ಕೆ ನಿಂತ, ಬೆದರಿಸಿ ನೋಡಿದ ಅದಕ್ಕೂ ಆಕೆ ಬಗ್ಗದಿದ್ದಾಗ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ನೋಡು ಎಂದು ಹೆದರಿಸಿದ. ಯಾವ ತಾಯಿ ತಾನೇ ತನ್ನ ಮುಂದೆಯೆ ತನ್ನ ಮಕ್ಕಳು ಸಾಯಲಿ ಎಂದು ಬಯಸುತ್ತಾಳೆ? ಪುನಃ ಅಶ್ವಿನಿ ಕುಟುಂಬದ ಹಿರಿಯರನ್ನು ಸೇರಿಸಿದಳು. ಮೂರೂ ಜನ ಹೇಳುವುದನ್ನು ಕೇಳಿದ ಹಿರಿಯರು ಅದು ರಾಜೇಶನಿಗೆ ಹಿರಿಯರಿಂದ ಬಂದ ಆಸ್ತಿ ಅಂದರೆ ಪಿತ್ರಾರ್ಜಿತ ಆಸ್ತಿ. ಅದರಲ್ಲಿ ರಂಜಿತಾಳಿಗೂ ಪಾಲಿದೆ. ಆದ್ದರಿಂದ ಅಂಗಡಿಯಿಂದ ಬರುವ ಹಣದಲ್ಲಿ ಅರ್ಧ ಪಾಲನ್ನು ಅಶ್ವಿನಿಗೆ ನೀಡುವುದು ಅದರಲ್ಲೇ ಆಕೆ ಮನೆಖರ್ಚನ್ನು ತೂಗಿಸಿಕೊಂಡು ಹೋಗಬೇಕು. ಉಳಿದ ಹಣದಲ್ಲಿ ಎರಡು ಪಾಲನ್ನು ಮಾಡಿ ಒಂದೊಂದು ಪಾಲನ್ನು ರಮೇಶ ಹಾಗೂ ರಂಜಿತಾರಿಗೆ ಪ್ರತಿ ತಿಂಗಳು ನೀಡ ಬೇಕೆಂದು ತೀರ್ಮಾನ ಮಾಡಿದರು. ಆಗ ಪ್ರತಿ ತಿಂಗಳು ಬರುತ್ತಿರುವ ನಲ್ವತ್ತು ಸಾವಿರ ರೂಪಾಯಿಗಳಲ್ಲಿ ಅಶ್ವಿನಿಗೆ ಇಪ್ಪತ್ತು ಸಾವಿರ ರೂಪಾಯಿಗಳು ದೊರಕುತ್ತಿದ್ದವು. ಅದರಲ್ಲಿ ಆಕೆ ಮನೆತನ ನಡೆಸಿಕೊಂಡು ಹೋಗುವುದು, ಏನಾದರೂ ರಿಪೇರಿ ಇತ್ಯಾದಿ ಖರ್ಚು ಬಂದರೆ ನಿಭಾಯಿಸಿಕೊಂಡು ಹೋಗುತ್ತಿದ್ದಳು. ರಂಜಿತಾ ತನಗೆ ಬರುತ್ತಿರುವ ಹಣವನ್ನು ಬ್ಯಾಂಕಿನಲ್ಲಿ ಆರ್.ಡಿ. ಮಾಡಿದ್ದಳು. ಆದರೆ ಸ್ನೇಹಿತರ ಸಹವಾಸದಿಂದ ಹಲವಾರು ಚಟಗಳನ್ನು ಅಂಟಿಸಿ ಕೊಂಡಿದ್ದ ರಮೇಶನಿಗೆ ಮಾತ್ರ ತನ್ನ ಪಾಲಿಗೆ ಬರುತ್ತಿದ್ದ ಹಣ ಯಾತಕ್ಕೂ ಸಾಲುತ್ತಿರಲಿಲ್ಲ. ಪುನಃ ಆತ ತಾಯಿಯ ಹತ್ತಿರ ಹೆಚ್ಚು ಹಣ ಕೊಡಬೇಕೆಂದು ತಕರಾರು ತೆಗೆಯಲು ಆರಂಭಿಸಿದ್ದ. ಆತನ ಕಾಟ ತಾಳಲಾರದೇ ಅಶ್ವಿನಿ ತನ್ನ ಪಾಲಿನ ಹಣದಲ್ಲಿಯೇ ಸ್ವಲ್ಪ ಹಣವನ್ನು ಆತನಿಗೆ ಕೊಡುತ್ತಿದ್ದಳು. ಹೇಗೇ ಆಗಲಿ ಇದ್ದೊಬ್ಬ ಮಗಳ ಜೀವನ ಸಮಸ್ಯೆ ಇಲ್ಲದೇ ನಡೆಯುತ್ತಿದೆ ಅನ್ನುವುದೇ ರೇವತಿಗೆ ಸಮಾಧಾನದ ವಿಷಯವಾಗಿತ್ತು.
ಬೆಳಿಗ್ಗೆ ಎದ್ದು ಬೆಡ್ ಟೀ ಕುಡಿದು ಉಪಾಹಾರಕ್ಕೆ ಏನಾದರೂ ತಯಾರಿಸಿಕೊಳ್ಳ ಬೇಕೆಂದು ತಯಾರಾಗುತ್ತಿರುವಾಗ ರಮೇಶನ ಫೋನ್ ಬಂತು. ಅಮ್ಮ ಬಚ್ಚಲೊಲೆಗೆ ಉರಿ ಹಚ್ಚುವಾಗ ಸೀರೆಗೆ ಬೆಂಕಿ ತಗಲಿ ಆಕೆಯ ಮೈ ಎಲ್ಲಾ ಸುಟ್ಟು ಹೋಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ನೀನು ಬೇಗ ಬಾ ಅಜ್ಜಿ ನನಗೆ ಯಾಕೋ ತುಂಬಾ ಭಯವಾಗುತ್ತಿದೆ. ಫೋನಿನಲ್ಲಿ ಮಾತನಾಡುವಾಗ ತಡವರಿಸುತ್ತಾ ಮೊಮ್ಮಗ ಅಳುತ್ತಿರುವುದನ್ನು ಕೇಳಿ ಅಶ್ವಿನಿಗೆ ಏನೋ ದೊಡ್ಡ ಅಪಾಯವೇ ಆಗಿದೆ ಎಂದು ಅಂದಾಜಿಸಿ ರೇವತಿ ಆಸ್ಪತ್ರೆಗೆ ಓಡಿ ಬಂದಿದ್ದಳು. ಬಂದ ಮೇಲೆ ತನ್ನ ಊಹೆ ಸರಿ ಎಂದು ಅರಿತಾಗ ಆ ತಾಯಿಯಕರುಳು ವಿಲವಿಂದು ಒದ್ದಾಡ ತೊಡಗಿತು. ಬೆಳಿಗ್ಗೆ ಎದ್ದ ಕೂಡಲೇ ಅಶ್ವಿನಿಗೆ ಸ್ನಾನದ ಹಂಡೆಗೆ ಉರಿಹಚ್ಚುವ ರೂಢಿ ಇತ್ತು. ರೇವತಿಯೇ ಮಗಳಿಗೆ ಹಲವಾರು ಸಲಸುಮ್ಮನೇ ಯಾಕೆ ಇಷ್ಟು ಒದ್ದಾಟ ಮಾಡುತ್ತಿ? ಈಗ ಸೋಲಾರ್, ಗ್ಯಾಸ್ ಗೀಜರ್, ಕರೆಂಟ್ ಗೀಜರ್ ಎಲ್ಲಾ ಬಂದಿದೆ… ಯಾವುದಾದರೂ ಒಂದನ್ನು ಹಾಕಿಸಿಕೊಳ್ಳ ಬಾರದೇ? ಹೊಗೆಯಿಂದ ಸುಮ್ಮನೇ ಮನೆಯನ್ನು ಯಾಕೆ ಕಪ್ಪು ಮಾಡಿಕೊಳ್ಳುವಿ? ಎಂದೆಲ್ಲ ಬುದ್ಧಿ ಹೇಳಿದ್ದಳು. ಆದರೆ ಅಶ್ವಿನಿ ಇಲ್ಲಮ್ಮಾ... ನನಗೆ ಅದೆಲ್ಲ ತಿಳಿಯುವುದಿಲ್ಲ. ಮಕ್ಕಳನ್ನಂತು ನೀನು ನೋಡಿರುವೆಯಲ್ಲ.. ಲೆಕ್ಕಕ್ಕೆ ಇದ್ದರೆ ಜಮಾಕ್ಕೆ ಇಲ್ಲ ಅನ್ನುವಂತೆ ಇರುತ್ತಾರೆ. ಮಗಳಿಗೆ ಟಿ.ವಿ. ಮತ್ತು ಮೊಬೈಲ್ ಬಿಟ್ಟರೆ ಬೇರೇನೂ ಬೇಡ. ಇನ್ನು ಮಗನಿಗಂತೂ ಫಟಿಂಗತನವೇ ದೀಕ್ಷೆ... ಎಲ್ಲಾದರೂ ನಾನು ಅದನ್ನು ಹಾಕಿಸಿಕೊಂಡೆ ಎಂದು ತಿಳಿ... ಇವರ ಸ್ನಾನಕ್ಕೆ ನಾನೇ ಬಿಸಿ ನೀರನ್ನು ಇಡಬೇಕಾಗುತ್ತದೆ. ಇದಾದರೆ ಹಂಡೆಯಲ್ಲಿ ನೀರು ಕಾದಿರುತ್ತದೆ. ಯಾವಾಗ ಬೇಕಾದರೂ ಸ್ನಾನ ಮಾಡಲಿ... ಅಲ್ಲದೇ ಮನೆಯ ಸುತ್ತಲೂ ಬೇಕಾದಷ್ಟು ತೆಂಗಿನ ಮರಗಳಿವೆ... ಅವುಗಳಿಂದ ತೆಂಗಿನ ಗರಿ, ತೆಂಗಿನ ಸಿಪ್ಪೆ, ಕರಟ ಎಲ್ಲಾ ಸಿಗುತ್ತದೆ. ಬೆಂಕಿ ಹಚ್ಚದಿದ್ದರೆ ಅದೆಲ್ಲವನ್ನು ಹೊರಗೆ ಬೀಸಾಡಬೇಕಾಗುತ್ತದೆ. ಬೆಂಕಿ ಹಚ್ಚಿದರೆ ಅವನ್ನೆಲ್ಲ ಉಪಯೋಗಿಸಿದಂತೆಯು ಆಗುತ್ತದೆ, ನೀರೂ ಬಿಸಿಯಾಗುತ್ತದೆ.... ಅನ್ನುತ್ತಿದ್ದಳು. ಇಂದು ಅದೇ ನೀರ ಹಂಡೆಯೇ ಅಶ್ವಿನಿಯ ಸಂಕಷ್ಟಕ್ಕೆ ಕಾರಣವಾಯಿತು ಎನ್ನುವುದು ಗಮನಕ್ಕೆ ಬಂದು ರೇವತಿ ಮನದೊಳಗೆ ಅತ್ತಳು. ದೈವಕ್ಕೆ ಹಿಡಿ ಶಾಪ ಹಾಕಿದಳು. ಶಾಪಹಾಕುವುದರೊಂದಿಗೆ ಆತನಲ್ಲಿ ಪ್ರಾರ್ಥನೆಯನ್ನೂ ಮಾಡಿದಳು.ದೇವರೇ ಆಕೆಯ ಜೀವಕ್ಕೆ ಏನೂ ಆಗದಂತೆ ಮಾಡಪ್ಪ… ಈ ಮಕ್ಕಳನ್ನು ಅನಾಥರನ್ನಾಗಿ ಮಾಡಬೇಡ. ನನ್ನ ಮಗಳು ನನ್ನ ಕಣ್ಣಮುಂದೆಯೇ ಸಾಯುವಂತೆ ಮಾಡಬೇಡ… ಅದನ್ನು ನೋಡುವ ಕಷ್ಟವನ್ನು ನನಗೆ ನೀಡಬೇಡ… ಆಕೆಯ ಪ್ರಾರ್ಥನೆ ಇನ್ನೂ ಮುಗಿದಿರಲಿಲ್ಲ ಅಷ್ಟರೊಳಗೆ ಅಲ್ಲಿಗೆ ಬಂದ ನರ್ಸ್ ಹತ್ತನೇ ನಂಬರಿನ ಬೆಡ್ಡಿನ ಪೇಶಂಟಿನ ಪೈಕಿ ಯಾರಿದ್ದೀರಿ? ಯಾರಿದ್ದೀರಿ? ತುಂಬಾ ಅವಸರದಿಂದ ಕರೆದಳು. ಕೂಡಲೇ ರೇವತಿ ಮತ್ತು ರಮೇಶ ಇಬ್ಬರೂ ಅಶ್ವಿನಿಯ ಬೆಡ್ಡಿನತ್ತ ಓಡಿದರು. ನರ್ಸ್ ಯಾವುದೋ ಔಷಧ ಬರೆದ ಒಂದು ಚೀಟಿಯನ್ನು ಅವರ ಕೈಗೆ ಕೊಡುತ್ತಾಅರ್ಜಂಟ್.. ಅಂದರೆ ತುಂಬಾ ಅರ್ಜಂಟ್ ಆಗಿ ಈ ಔಷಧವನ್ನು ಈಗಲೇ ತರಬೇಕು… ಆಸ್ಪತ್ರೆಯ ಮೆಡಿಕಲ್ ಶಾಪ್‌ನಲ್ಲಿ ಈ ಔಷಧ ಸ್ಟಾಕ ಇಲ್ಲ… ಹೊರಗಿನಿಂದ ತರಬೇಕು… ನೀವು ತಡಮಾಡಿದಷ್ಟಕ್ಕೂ ರೋಗಿಯ ಜೀವಕ್ಕೆ ಆಪತ್ತು ಹೆಚ್ಚು… ಅಂದಳು.
ರಮೇಶ ಆ ಚೀಟಿಯನ್ನು ತೆಗೆದುಕೊಳ್ಳಲು ಸ್ವಲ್ಪ ಹಿಂದೆ ಮುಂದೆ ನೋಡಿದ. ಹೋ ಆಸ್ಪತ್ರೆಗೆ ಬರುವ ಅವಸರದಲ್ಲಿ ಹಣ ತರಲು ಮರೆತಿರಬೇಕು ಪಾಪ..! ಎಂದು ಕಲ್ಪಿಸಿಕೊಂಡ ರೇವತಿ ತನ್ನ ಪರ್ಸಿನಿಂದ ಎರಡು ಸಾವಿರದ ಐದು ನೋಟುಗಳನ್ನು ತೆಗೆದು ಆತನಿಗೆ ಕೊಡುತ್ತಾಳೆ. ಹಣ ತೆಗೆದುಕೊಂಡವನೇ ರಮೇಶ ಹೊರಗೆ ಓಡುತ್ತಾನೆ. ಅಮ್ಮಾ.. ಅಮ್ಮಾ… ಅಶ್ವಿನಿ ತನ್ನನ್ನೇ ಕರೆಯುತ್ತಿರುವುದು ಆಗ ರೇವತಿಯ ಗಮನಕ್ಕೆ ಬರುತ್ತದೆ. ಅಸಹನೀಯವಾಗಿ ನೋವು ತಿನ್ನುತ್ತಿರುವ ಅಶ್ವಿನಿಯ ಶರೀರದ ಶಕ್ತಿ ಎಲ್ಲವೂ ಅದಾಗಲೇ ಬತ್ತಿ ಹೋಗಿತ್ತು. ಧ್ವನಿ ಸಣ್ಣದಾಗಿತ್ತು. ಆ ಕಾರಣದಿಂದ ಮುದುಕಿಯಾದ ರೇವತಿಗೆ ಮಗಳು ಕ್ಷೀಣ ಧ್ವನಿಯಲ್ಲಿ ಕೂಗಿದ್ದು ಹೇಗೆ ಕೇಳಬೇಕು? ಆ ಕೂಗು ಕಿವಿಗೆ ಕೇಳದಿದ್ದರೂ ಕರುಳಿನಲ್ಲಿ ಏನೋ ಒಂದು ರೀತಿಯ ಸಂಕಟ ಆಗಲಾರಂಭಿಸಿತು. ರೇವತಿ ಮಗಳ ಕಡೆ ತಿರುಗಿದಳು. ಆಗ ಆಕೆಗೆ ತಿಳಿಯುತ್ತದೆ ಮಗಳು ತನ್ನನ್ನೇ ಕರೆಯಲು ಪ್ರಯತ್ನಿಸುತ್ತಿದ್ದಾಳೆ ಎಂದು. ಅವಳು ವೇಗವಾಗಿ ಮಗಳ ಬೆಡ್ಡಿನ ಹತ್ತಿರ ಬಂದಳು. ಅಶ್ವಿನಿ ಕಣ್ಸನ್ನೆಯಿಂದಲೆ ತಾಯಿಗೆ ಕುಳಿತು ಕೊಳ್ಳಲು ಹೇಳಿದಳು. ರೇವತಿ ಆಕೆಯ ಮಂಚದ ತುದಿಗೆ ಕುಳಿತು ಕೊಂಡು ಏನು? ಎನ್ನುವಂತೆ ಪ್ರಶ್ನಾರ್ಥಕವಾಗಿ ಮಗಳ ಮುಖವನ್ನೇ ನೋಡ ತೊಡಗಿದಳು. ಮಗಳ ಮಾತುಗಳಿಗಿಂತ ರೇವತಿಗೆ ಮಗಳ ಮುಖವನ್ನು ನೋಡಿಯೇ ಹೆದರಿಕೆ ಆಗ ತೊಡಗಿತು. ಅಶ್ವಿನಿಯ ಮೈಮುಖವೆಲ್ಲಾ ಸುಟ್ಟು ಹೋಗಿ ಅವಳ ರೂಪ ಅಕರಾಳ-ವಿಕರಾಳವಾಗಿ ಕಾಣಿಸುತ್ತಿತ್ತು. ಯಾವುದೋ ದೆವ್ವವೊಂದನ್ನು ತಂದು ಮಲಗಿಸಿದಂತೆ...! ಅವಳ ಆ ರೂಪವನ್ನು ನೋಡಿ ರೇವತಿಯ ಕರುಳು ಹಿಚುಕಿದಂತಾಯಿತು. ದುಃಖ ಮತ್ತು ಭಯದಿಂದ ಆಕೆಯ ಹೃದಯ ಚಡಪಡಿಸಿತು. ``ಅಮ್ಮಾ.. ಅಮ್ಮಾ.. ನಾನು ಇನ್ನು ಬದುಕುವದಿಲ್ಲ.... ಖಂ..ಡಿ..ತ ಬ...ದು...ಕು..ವು..ದಿ..ಲ್ಲ... ಆದರೆ ಅದಕ್ಕಿಂತ ಮೊದಲು ನಿ..ನ..ಗೊಂ..ದು ಸ..ತ್ಯ.. ಹೇ...ಳ...ಬೇ...ಕು..., ಹೇ..ಳ...ಲೇ ಬೇ..ಕು... ಆ..ದ..ರೆ.. ನೀನು ಅದನ್ನು ಬೇ..ರೆ..ಯ..ವ..ರಿ..ಗೆ.. ಹೇ..ಳು..ವು..ದಿ..ಲ್ಲ.. ಅಂತ ಆಣೆ ಮಾ..ಡ..ಬೇ..ಕು.. ಇಷ್ಟು ಹೇಳಿ ಕಷ್ಟದಿಂದ ಅಶ್ವಿನಿ ತಾಯಿಯಿಂದ ಆಣೆ ಪಡೆಯಲು ಕೈಯನ್ನು ಮುಂದೆ ಮಾಡಲು ಪ್ರಯತ್ನಿಸಿದಳು. ಅವಳು ಅತಿಯಾದ ಕಷ್ಟದಿಂದ ಮಾತನಾಡುತ್ತಿದ್ದಾಳೆ... ಕೈಗಳನ್ನು ಮುಂದೆ ಮಾಡಲು ಸಹ ಆಕೆ ಪರದಾಡುತ್ತಿರುವುದೇ ಅದಕ್ಕೆ ಸಾಕ್ಷಿ...ಅನ್ನುವದು ರೇವತಿಗೆ ಅರಿವಾಯಿತು. ಅಲ್ಲದೇ ಅಶ್ವಿನಿಯ ಮುಖದ ಮೇಲೂ ಅಂತಹ ನೋವಿನ ರೇಖೆಗಳು ರೇವತಿಗೆ ಸ್ಪಷ್ಟವಾಗಿ ಕಂಡವು. ಅಶ್ವಿನಿ ಇನ್ನು ಹೆಚ್ಚು ಕಾಲ ಬದುಕಿ ಉಳಿಯಲಾರಳು ಎನ್ನುವ ಸತ್ಯ ಆ ತಾಯಿಕರುಳಿಗೆ ಸ್ಪಷ್ಟವಾಗಿ ತಿಳಿದು ತನ್ನ ಕಣ್ಣ ಮುಂದೆಯೇ ಸಾವಿನತ್ತ ಸಾಗುತ್ತಿರುವ ಮಗಳ ದುರದೃಷ್ಟವನ್ನು ನೆನೆದು ರೇವತಿಯ ಕಣ್ಣುಗಳಿಂದ ಕಣ್ಣೀರು ಸುರಿಯಲು ಆರಂಭವಾಯಿತು. ``ಮಗಳು ಹೇಳುವ ಸತ್ಯವಾದರೂ ಏನು? ಆಕೆಗೆ ಯಾರಾದರೂ ಬೇಕೇಂದೆ ಬೆಂಕಿ ಹಚ್ಚಿರ ಬಹುದೆ? ಯಾಕೆ..ಯಾಕೆ.. ಅಥವಾ ಆಕೆ ತಾನು ಬಚ್ಚಿಟ್ಟ ಹಣ, ಒಡವೆಯ ಬಗ್ಗೆ ಹೇಳುತ್ತಿರಬಹುದೆ? ಈ ರೀತಿಯ ಹತ್ತಾರು ವಿಚಾರಗಳು ಒಮ್ಮೆಗೆ ರೇವತಿಯ ಮನಸ್ಸಿಗೆ ಬಂದು ಗೊಂದಲವನ್ನುಂಟು ಮಾಡಿದವು. ಇನ್ನೊಂದೆಡೆ ಇನ್ನು ಕೆಲವೇ ಕ್ಷಣಗಳಲ್ಲಿ ಮಗಳು ಶಾಶ್ವತವಾಗಿ ತನ್ನನ್ನು ಬಿಟ್ಟು ಹೋಗುವಳಲ್ಲ ಎನ್ನುವ ದುಃಖ.. ಏನೇ ಆಗಲಿ ಆಕೆಯ ಕೊನೆಯ ಮಾತುಗಳನ್ನು ಗಮನವಿಟ್ಟು ಕೇಳಬೇಕು. ಅದು ಏನಾದರೂ ಕೋರಿಕೆಯಾಗಿದ್ದರೆ ತನ್ನ ಜೀವ ಒತ್ತೆ ಇಟ್ಟಾದರೂ ಪೂರ್ಣಗೊಳಿಸಬೇಕು. ಹೀಗೆಂದು ರೇವತಿ ತನ್ನ ಕಣ್ಣು, ಮನಸ್ಸು, ಕಿವಿ ಮೂರನ್ನೂ ಮಗಳತ್ತ ತಿರುಗಿಸಿ ಆಕೆಯ ಮಾತುಗಳನ್ನು ಕೇಳಲು ಉತ್ಸುಕಳಾದಳು. ``ಹೇಳಮ್ಮ.. ಹೇಳು... ಏನದು ವಿಷಯ...? ದೇವರಾಣೆ... ನನ್ನ ಗಂಡನ ಮೇಲಾಣೆ ಯಾರಿಗೂ ಹೇಳುವುದಿಲ್ಲ... ಆಕೆಗೆ ವಿಶ್ವಾಸ ಬರುವ ಸಲುವಾಗಿ ಹೇಳಿದಳು. ಪುನಃ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿಕೊಂಡರೂ ಅಶ್ವಿನಿಗೆ ಗಟ್ಟಿಯಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ ತನ್ನ ಸಾವಿನ ರಹಸ್ಯವನ್ನು ಒಬ್ಬರಿಗಾದರೂ ತಿಳಿಸಲೇ ಬೇಕು ಎನ್ನುವ ಛಲದಿಂದ ತಡವರಿಸುತ್ತಾ... ತಡವರಿಸುತ್ತಾ ಮಾತನಾಡಲು ಆರಂಭಿಸಿದಳು. ``ಅಮ್ಮಾ... ನ...ನ..ಗೆ.. ಬೆಂ..ಕಿ.. ಆ..ಕ..ಸ್ಮಿ..ಕ.. ವಾ..ಗಿ ತ..ಗ..ಲಿ..ದ..ಲ್ಲ... ನಾನು ನೀರೊಲೆಗೆ ಬೆಂಕಿ ಹಾಕುತ್ತಿರುವಾಗ ಹಿಂದಿನಿಂದ ಬಂದ ನನ್ನ ಮಗ ರಮೇಶನೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು... ಅವನಿಗೆ ನಾನು ಕೊಡುವ ದುಡ್ಡು ಕಮ್ಮಿ ಆಗುತ್ತದೆಯಂತೆ... ನಾನು ಸತ್ತರೆ ನನ್ನ ಪಾಲೂ ಸಹ ಅವನಿಗೆ ಸಿಗುತ್ತದೆ ಅಂತೆ... ಅದಕ್ಕಾಗಿ ನಾನು ಸಾಯಬೇಕಂತೆ... ಇದನ್ನು ಅವನೇ ಹೇಳಿದ್ದು... ಈಗ ನೋಡು ಹೇಗೆ ನಾಟಕ ಮಾಡುತ್ತಿದ್ದಾನೆ... ಎದುಸಿರು ಬಿಡುತ್ತಾ ಅಶ್ವಿನಿ ಮಾತನಾಡುತ್ತಿದ್ದರೆ ಆಕೆಯ ಮಾತು ಕೇಳಿ ರೇವತಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ``ಹೀಗೆಂದು ನೀನು ಮೊದಲೇ ಪೋಲೀಸರಿಗೆ ಹೇಳಿಬಿಡಬೇಕಾಗಿತ್ತು, ಅವರು ಇಷ್ಟರೊಳಗೆ ಅವನನ್ನು ಹಿಡಿದು ಜೈಲಿಗೆ ಹಾಕುತ್ತಿದ್ದರಲ್ಲವೇ? ರೇವತಿ ರೋಷದಿಂದ ಅಂದಳು. ``ಬೇಡಮ್ಮಾ... ಬೇಡ... ನಾನು ಪೋಲೀಸರಿಗೆ ಹೇಳಿದೆ ಅಂತಿಟ್ಟುಕೋ... ಸಾಯುವವಳು ಬದುಕುಳಿಯುವೆನಾ? ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಲ್ಲವೇ? ಇನ್ನೂ ಬಾಳಿ ಬೆಳಗ ಬೇಕಾದವನು... ಅವನ ಜೀವನದಲ್ಲಿ ಕತ್ತಲೆ ತಂದು ಸತ್ತು ಹೋಗುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ... ಆ..ದ..ರೆ.. ರಂ..ಜಿ..ತ..ಳಿ..ಗೆ.. ಎ..ಚ್ಚ..ರಿ..ಕೆ.. ಕೊ..ಡು..ವ.. ಸ..ಲು..ವಾ..ಗಿ.. ನಿ..ನ..ಗೆ.. ಹೇ..ಳು..ತ್ತಿ..ದ್ದೇ..ನೆ... ಆ..ಕೆ..ಯೂ.. ನ..ನ್ನಂ..ತೆ.. ಸಾ..ಯು..ವು..ದು.. ಬೇ..ಡ.. ಅಂ....ತ... ಅಶ್ವಿನಿಯ ಧ್ವನಿ ಬರು ಬರುತ್ತಾ ಸಣ್ಣದಾಗಿ ಕೊನೆಗೊಮ್ಮೆ ನಿಂತೇ ಬಿಟ್ಟಿತು. ತಲೆ ಒಂದು ಕಡೆಗೆ ವಾಲಿತು, ದುಃಖ, ಉರಿ, ನೋವಿನಿಂದ ಅವಳನ್ನು ಮುಕ್ತಗೊಳಿಸುತ್ತಾ... ರೇವತಿಗೆ ಮಗಳು ಹೇಳಿದ ವಿಷಯದ ಆಘಾತದಿಂದ ಹೊರ ಬರಲು ಸಹ ಸಾಧ್ಯವಾಗಲಿಲ್ಲ. ಅವಳು ಶೂನ್ಯವನ್ನೇ ದೃಷ್ಠಿಸುತ್ತಾ ಪ್ರಜ್ಞಾಶೂನ್ಯಳಾದಂತೆ ಹಾಗೆಯೇ ಕುಳಿತಿದ್ದಳು. ಅಶ್ವಿನಿಯ ಮಗ ರಮೇಶ ಬಂದು ``ಸಿಸ್ಟರ್ ಈ ಔಷಧ ಎಲ್ಲೂ ಸಿಗಲಿಲ್ಲ... ಎನ್ನುತ್ತಿದ್ದ ಮಾತುಗಳು ಮಾತ್ರ ಆಕೆಯ ಕಿವಿಯ ಮೇಲೆ ಚೂರಿಯ ಅಲುಗಿನಂತೆ ತಿವಿಯುತ್ತಿದ್ದವು. (ಆರಗೋಡು ಸುರೇಶ ಶೆಣೈಯವರಅನ್ನ ನುಂಗಿದ ಕೈ ಕಥಾ ಸಂಕಲನದಿಂದ ಆಯ್ದದ್ದು)


Spread the love

Leave A Comment

All fields marked with an asterisk (*) are required

error: Content is protected !!
Chat on Whatsapp
1
Scan the code
Hello 👋
How can we help you?